ಬೆಂಗಳೂರು: ಎದುರಾಳಿ ತಂಡದವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ ಇಬ್ಬರು ರೌಡಿಗಳು ಹಾಗೂ ಅವರ ಐವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಬನ್ನೇರುಘಟ್ಟ ರಸ್ತೆಯ ಲಕ್ಷ್ಮಿನಾರಾಯಣ್ ಅಲಿಯಾಸ್ ಲಕ್ಷ್ಮಿ, ರಾಕೇಶ್ ಅಲಿಯಾಸ್ ರಾಖಿ, ಹರೀಶ್, ಬಿಳೇಕಹಳ್ಳಿಯ ನವೀನ್, ಕಿಶೋರ್, ದೇವರ ಚಿಕ್ಕನಹಳ್ಳಿಯ ವಿನೋದ್ ಹಾಗೂ ನಾಗರಾಜ್ ಬಂಧಿತರು. ಅವರಿಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.
‘ಜಯನಗರ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಲಕ್ಷ್ಮಿ ಹಾಗೂ ರಾಖಿ ಹೆಸರಿದೆ. ಇವರಿಬ್ಬರು, ತಮ್ಮ ಎದುರಾಳಿಗಳನ್ನು ಕೊಲೆ ಮಾಡಲು ಸಜ್ಜಾಗಿದ್ದರು. ಸಾರ್ವಜನಿಕರನ್ನು ಸುಲಿಗೆ ಮಾಡಲು ಸಹ ಸಂಚು ರೂಪಿಸಿದ್ದರು. ಸೆ.2ರಂದು ಬನ್ನೇರುಘಟ್ಟ ರಸ್ತೆಯ ಗುರು ಪ್ಯಾಲೇಸ್ ಬಳಿ ಸಹಚರರ ಜೊತೆ ರೌಡಿಗಳು ಕಾಣಿಸಿಕೊಂಡಿದ್ದರು. ಅವರೆಲ್ಲರ ಬಳಿ ಮಾರಕಾಸ್ತ್ರಗಳು ಇದ್ದವು.’
‘ಸಂಚಿನ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಸಹಚರರ ಸಮೇತ ರೌಡಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹುಳಿಮಾವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ’ ಎಂದೂ ಸಿಸಿಬಿ ಪೊಲೀಸರು ತಿಳಿಸಿದರು.