ಬೆಂಗಳೂರು: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಲವು ಮುಖಂಡರು ಭಾನುವಾರ ಬಿಜೆಪಿ ಸೇರಿದರು. ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
‘ಬಿಜೆಪಿಯು ಅಲ್ಪಸಂಖ್ಯಾತರ ವಿರೋಧಿ ಎಂದು ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ಈಗ ಅಲ್ಪಸಂಖ್ಯಾತ ಸಮುದಾಯದ, ಅದರಲ್ಲಿಯೂ ಮುಖ್ಯವಾಗಿ ನೂರಾರು ಮುಸ್ಲಿಮರು ಪಕ್ಷ ಸೇರಿದ್ದಾರೆ. ಇದು ಪ್ರತಿಪಕ್ಷಗಳಿಗೆ ಸ್ಪಷ್ಟ ಸಂದೇಶ ಸಾರಲಿದೆ’ ಎಂದು ಸಚಿವರು ಹೇಳಿದರು.
‘ಬಿಜೆಪಿ ರಾಷ್ಟ್ರೀಯ ಪಕ್ಷ. ಸಹಬಾಳ್ವೆ, ಸೌಹಾರ್ದವನ್ನು ನಂಬಿರುವ ಪಕ್ಷ. ವಿನಾಕಾರಣ ಪಕ್ಷದ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಹುಯಿಲೆಬ್ಬಿಸುತ್ತಿವೆ’ ಎಂದರು.
‘ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಲು ಇವರೆಲ್ಲರೂ ಶ್ರಮಿಸಲಿದ್ದಾರೆ’ ಎಂದೂ ಅಶ್ವತ್ಥನಾರಾಯಣ ಹೇಳಿದರು.
ನಗರದ ರಾಜಮಹಲ್ ಎಕ್ಸ್ಟೆನ್ಷನ್ನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಆರ್. ಗೀತಾಂಜಲಿ, ಆರ್. ವೇಣುಕುಮಾರ್ ಹಾಗೂ ಶಕೀಲ್ ಅಹಮದ್ ಮತ್ತವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾದರು.