ಬೆಂಗಳೂರು: ‘ಸನಾತನ ಹಿಂದೂ ಧರ್ಮವು ಮೌಲಿಕ ತತ್ವಗಳ ಆಗರವಾಗಿದೆ. ಈ ಧರ್ಮದ ಮೇಲೆ ನಿರಂತರ ಸಾಂಸ್ಕೃತಿಕ ಆಕ್ರಮಣ ನಡೆಯುತ್ತಿದೆ’ ಎಂದು ಸಾಂಸ್ಕೃತಿಕ ಚಿಂತಕ ಕೊನ್ರಾಡ್ ಎಲ್ಸ್ಟ್ ಬೇಸರ ವ್ಯಕ್ತಪಡಿಸಿದರು.
ದಿ ಮಿಥಿಕ್ ಸೊಸೈಟಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಪ್ರೊ.ಎಂ.ವಿ. ಕೃಷ್ಣರಾವ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ‘ಹಿಂದೂ ಧರ್ಮ ಮತ್ತು ಸಾಂಸ್ಕೃತಿಕ ಯುದ್ಧಗಳು’ ಎಂಬ ವಿಷಯದ ಬಗ್ಗೆ ಮಾತನಾಡಿದರು.
‘ನೈತಿಕ ಮೌಲ್ಯಗಳು ಸದಾಕಾಲ ಧರ್ಮದ ಅಡಿಪಾಯವಾಗಿರಬೇಕು. ಹಿಂದೂ ಧರ್ಮದ ಮೇಲೆ ಅನೇಕ ಶತಮಾನಗಳಿಂದ ಸಾಂಸ್ಕೃತಿಕ ಮತ್ತು ಬೌದ್ಧಿಕ ದಾಳಿಗಳು ನಡೆಯುತ್ತಿವೆ. ಈ ದಾಳಿಗಳನ್ನು ಸಮರ್ಥವಾಗಿ ಹಿಂದೂ ಧರ್ಮ ಎದುರಿಸಿದೆ. ಭಾರತೀಯ ಸಮಾಜದಲ್ಲಿ ಕಾಲ ಕಾಲಕ್ಕೆ ಪ್ರಚಲಿತವಿರುವ ಆಚರಣೆಗಳು ಆಯಾ ಕಾಲಘಟ್ಟಕ್ಕೆ ಪ್ರಸ್ತುತವಾಗಿದ್ದರೂ, ಅವುಗಳನ್ನು ಪ್ರಶ್ನಿಸುವ ಅಧಿಕಾರವನ್ನು ಭಾರತೀಯ ಸಮಾಜ ಮತ್ತು ಹಿಂದೂ ಧರ್ಮ ಜಗತ್ತಿಗೆ ನೀಡಿವೆ’ ಎಂದು ಹೇಳಿದರು.
‘ಸಮಕಾಲೀನ ಜಗತ್ತಿನಲ್ಲಿರುವ ಅನೇಕ ಧರ್ಮಗಳು ಈ ಪ್ರಶ್ನಿಸುವ ಅಧಿಕಾರವನ್ನು ಜನರಿಗೆ ನೀಡಿಲ್ಲ. ಈ ಕಾರಣ ಆ ಧರ್ಮಗಳಲ್ಲಿ ಹೆಚ್ಚು ಜಟಿಲತೆ ಕಂಡುಬರುತ್ತಿದೆ. ಈ ಮೂಲಕ ಅವುಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಸಹ ಕ್ರಮೇಣ ನಾಶವಾಗುತ್ತಿವೆ. ಇದು ಕಳವಳಕಾರಿ ಬೆಳವಣಿಗೆ ಆಗಿದೆ. ಆದ್ದರಿಂದ, ಇಂದಿನ ಕಾಲದಲ್ಲಿ ನಮ್ಮ ಸಾಂಸ್ಕೃತಿಕ ಆಚರಣೆಗಳನ್ನು ಮರುವ್ಯಾಖ್ಯಾನಿಸುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.
ಇತಿಹಾಸಕಾರ ಜಿ.ಬಿ. ಹರೀಶ್ ಅವರ ‘ಬೌದ್ಧಿಕ ಕ್ಷತ್ರಿಯರು’ ಪುಸ್ತಕವನ್ನು ದಿ ಮಿಥಿಕ್ ಸೊಸೈಟಿಯ ಉಪಾಧ್ಯಕ್ಷ ಪ್ರೊ. ಎಂ.ಕೊಟ್ರೇಶ್ ಲೋಕಾರ್ಪಣೆ ಮಾಡಿದರು. ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರಾದ ಪಿ.ಎಂ. ಗಿರಿಧರ್ ಉಪಾಧ್ಯಾಯ, ಎಸ್. ರವಿ, ಎಂ.ಆರ್. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.