ಬೆಂಗಳೂರು: ‘ದೇವದಾಸಿ ಪದ್ಧತಿಯನ್ನು ಬೇರು ಸಮೇತ ತೊಡೆದು ಹಾಕಲು ಕಾನೂನು ಇನ್ನಷ್ಟು ಬಲಿಷ್ಠವಾಗಬೇಕಿದೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪ್ರಟ್ಟರು.
ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಗುಡ್ (ದೇವದಾಸಿ ಪದ್ಧತಿಯಿಂದ ಮಕ್ಕಳ ರಕ್ಷಣೆ) ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ‘ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳೊಡನೆ ಸಮಾಲೋಚನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ದೇವದಾಸಿ ಪದ್ಧತಿ ಸಮಾಜವನ್ನು ಅಂಟುರೋಗದಂತೆ ಕಾಡುತ್ತಿದೆ. ಕಾನೂನು ರೂಪಿಸುವ ಅಧಿಕಾರ ಪುರುಷರ ಕೈಯಲ್ಲೇ ಇರುವ ಕಾರಣ ಬಲಿಷ್ಠ ಕಾನೂನು ಇಲ್ಲವಾಗಿದೆ’ ಎಂದರು.
‘ಹೆಣ್ಣುಮಕ್ಕಳು ಹೊರ ದೇಶಗಳಿಗೆ ಮಾರಾಟವಾಗುತ್ತಿದ್ದಾರೆ. ಇವರಲ್ಲಿ ಬಹುತೇಕರು ಅಪ್ರಾಪ್ತರೇ ಇರುವುದು ಶೋಚನೀಯ ಸಂಗತಿ. ಇದನ್ನು ತಡೆಗಟ್ಟುವ ಜವಾಬ್ದಾರಿ ಸರ್ಕಾರದ ಮೇಲಿದೆ’ ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ದೇವದಾಸಿ ಪದ್ಧತಿಗೆ ಪರಿಶಿಷ್ಟ ಸಮುದಾಯದ ಹೆಣ್ಣು ಮಕ್ಕಳೇ ಬಲಿಯಾಗುತ್ತಿದ್ದಾರೆ. ಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಿದೆ ಮತ್ತು ಕಾನೂನನ್ನು ಬಲಪಡಿಸಬೇಕಿದೆ’ ಎಂದರು.