ಬೆಂಗಳೂರು: ‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿನ ಮಹಾಕವಿ ಕುವೆಂಪು ರಸ್ತೆ ಹಾಗೂ ರಾಜಾಜಿನಗರ ಮೆಟ್ರೊ ನಿಲ್ದಾಣ ನಡುವಿನ ಪಿಲ್ಲರ್ (ಸಂಖ್ಯೆ 221) ಬೇರಿಂಗ್ನಲ್ಲಿ ದೋಷ ಕಾಣಿಸಿಕೊಂಡಿರುವುದರಿಂದ ಭಾನುವಾರ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ಅಂದು ಬೆಳಿಗ್ಗೆ 7ರಿಂದ 9ರವರೆಗೆ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣದಿಂದ ನಾಗಸಂದ್ರ ನಿಲ್ದಾಣದವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ನಂತರ ಎಂದಿನಂತೆ ಕಾರ್ಯಾಚರಣೆ ನಡೆಯಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಹೇಳಿದೆ.
ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆಯ ನೇರಳೆ ಮಾರ್ಗ ಹಳೆಯದಾಗಿರುವುದರಿಂದ ಆಗಾಗ್ಗೆ ಬೇರಿಂಗ್ ಬದಲಾವಣೆ ಮಾಡುವುದು ಅನಿವಾರ್ಯ ಎನ್ನಬಹುದು. ಆದರೆ, ಇತ್ತೀಚೆಗೆ ಕಾರ್ಯಾಚರಿಸುತ್ತಿರುವ ಹಸಿರು ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಬೇರಿಂಗ್ ಬದಲಾಯಿಸಲಾಗುತ್ತಿದೆ.
‘ಹಸಿರು ಮಾರ್ಗ ನಿರ್ಮಾಣವಾಗಿ ಐದು ವರ್ಷಗಳೂ ಆಗಿಲ್ಲ. ಇಷ್ಟು ಬೇಗ ಬೇರಿಂಗ್ ಹಾಳಾಗಿವೆ. ಈ ಹಿಂದೆ ಪಿಲ್ಲರ್ಗಳ ದುರಸ್ತಿಗಾಗಿ ಮಾಡಿದ ವೆಚ್ಚವನ್ನೂ ನಿಗಮವು ಬಹಿರಂಗಗೊಳಿಸಿಲ್ಲ. ಈ ಕುರಿತು ಸೂಕ್ತ ತನಿಖೆ ನಡೆಯಬೇಕು’ ಎಂದು ಬಿಎಂಆರ್ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಒತ್ತಾಯಿಸಿದ್ದಾರೆ.