ಬೆಂಗಳೂರು: ನಮ್ಮ ಮೆಟ್ರೊ ತನ್ನ ಕಾರಿಡಾರ್ಗಳ ಮಾರ್ಗವನ್ನು 118 ಕಿ.ಮೀ ವಿಸ್ತರಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲು ಟೆಂಡರ್ ಆಹ್ವಾನಿಸಿದೆ.
ಮಾರ್ಚ್ 27ರವರೆಗೆ ಬಿಡ್ಗಳನ್ನು ಸಲ್ಲಿಸಲು ಅವಕಾಶವಿದ್ದು, ಅಂದೇ ಅವುಗಳನ್ನು ತೆರೆಯಲಾಗುವುದು. ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಟೆಂಡರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಈ ಕಾರ್ಯಸಾಧ್ಯತಾ ವರದಿಯೊಂದಿಗೆ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೊ ಮಾರ್ಗಗಳ ಅಲೈನ್ಮೆಂಟ್, ಭೂಸ್ವಾಧೀನ, ಭೂಮಿ ಪಡೆಯಲು ಎದುರಾಗುವ ಸಮಸ್ಯೆಗಳೂ ಸೇರಿದಂತೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುವಂತೆ ಹೇಳಲಾಗಿದೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದರು.
‘ಇದು ಯೋಜನೆಯ ಮೊದಲ ಹೆಜ್ಜೆಯಾಗಿದ್ದು, ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರ ಒಪ್ಪಿದ ನಂತರ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುತ್ತದೆ’ ಎಂದರು.
ನಮ್ಮ ಮೆಟ್ರೊದ 4ನೇ ಹಂತದಲ್ಲಿ 61 ಕಿ.ಮೀ. ನ ನಾಲ್ಕು ವಿಸ್ತರಣಾ ಮಾರ್ಗ, 68 ಕಿ.ಮೀ ಉದ್ದ ಹೊಸ ಒಂದು ಮಾರ್ಗವನ್ನು ಸರ್ಕಾರ ಜನವರಿಯಲ್ಲಿ ಪ್ರಸ್ತಾಪಿಸಿತ್ತು. ಇದರಲ್ಲಿದ್ದ ತುಮಕೂರು ರಸ್ತೆಯಲ್ಲಿನ ಮಾದಾವರದಿಂದ ಕುಣಿಗಲ್ ಕ್ರಾಸ್ವರೆಗಿನ 11 ಕಿ.ಮೀ ಮಾರ್ಗವನ್ನು ಕಾರ್ಯಸಾಧ್ಯತಾ ವರದಿ ಟೆಂಡರ್ನಲ್ಲಿ ಕೈಬಿಡಲಾಗಿದೆ.
ಪ್ಯಾಕೇಜ್–1
50 ಕಿ.ಮೀ: ಚಲ್ಲಘಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ.