ಬೆಂಗಳೂರು: ಬಿಎಂಟಿಸಿ ಇಂಧನ ಉಳಿತಾಯ ಉಪಕ್ರಮಕ್ಕೆ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪೆಟ್ರೋಲಿಯಂ ಸಂಶೋಧನಾ ಸಂಸ್ಥೆಯ (ಪಿಸಿಆರ್ಎ) ಪ್ರತಿಷ್ಠಿತ ಸಕ್ಷಮ್–2021 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಪ್ರತಿ ಲೀಟರ್ ಡೀಸೆಲ್ಗೆ ಗರಿಷ್ಠ ಕಿಲೋ ಮೀಟರ್ ಬಸ್ ಸಂಚಾರ ಮಾಡುವ ಮೂಲಕ ₹24 ಕೋಟಿ ಉಳಿತಾಯ ಮಾಡಿರುವ ಸಾಧನೆಗೆ ಈ ಪ್ರಶಸ್ತಿ ದೊರೆತಿದೆ ಎಂದು ಬಿಎಂಟಿಸಿ ತಿಳಿಸಿದೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ₹5 ಲಕ್ಷ ನಗದು ಮತ್ತು ಪರಿತೋಷಕವನ್ನು ಒಳಗೊಂಡಿದೆ.
ಇದಲ್ಲದೇ ಭೈರತಿ (ಘಟಕ ಸಂಖ್ಯೆ 48), ದೀಪಾಂಜಲಿನಗರ (16) ಮತ್ತು ಕೆಂಗೇರಿ (37) ಘಟಕಗಳಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ತಲಾ ₹50 ಸಾವಿರ ಮತ್ತು ಪಾರಿತೋಷಕ ಒಳಗೊಂಡಿದೆ. ಜ.18ರಂದು ಆಹಾರ ಸಚಿವ ಕೆ.ಗೋಪಾಲಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.