ಬೆಂಗಳೂರು: ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ವತಿಯಿಂದ ಇದೇ 16 ಮತ್ತು 17ರಂದು ‘ನ್ಯಾಷನಲ್ ಕಾಲೇಜು ಸಾಹಿತ್ಯ ಹಬ್ಬ’ವನ್ನು ಬಸನಗುಡಿಯ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಎರಡು ದಿನ ನಡೆಯುವ ಈ ಹಬ್ಬದಲ್ಲಿ ಚಿತ್ರ, ನಾಟಕ ನೋಡುವುದು ಹೇಗೆ? ಕಥೆ ಬರೆಯುವಲ್ಲಿ ಆದ ಅನುಭವಗಳು, ಪತ್ರಿಕೆಗೆ ಬರೆಯುವುದು ಹೇಗೆ? ಕುವೆಂಪು ದರ್ಶನ–ದಾರ್ಶನಿಕತೆ, ಲೇಖಕಿಯರಿಗೆ ವಿಷಯದ ಆಯ್ಕೆಯಲ್ಲಿರುವ ಸವಾಲುಗಳು, ಕವಿಗೋಷ್ಠಿ ಮತ್ತು ಶಾಲೆಯ ಪ್ರಗತಿಯಲ್ಲಿ ಶಿಕ್ಷಕನ ಪಾತ್ರದ ಕುರಿತು ಗೋಷ್ಠಿಗಳು ನಡೆಯಲಿವೆ.
ಕಾವ್ಯದ ಓದು–ಒಂದು ಮಾದರಿ, ರಂಗಭೂಮಿ, ಕಿರುಚಿತ್ರ ತಯಾರಿಕೆಯಲ್ಲಿ ತೊಡಕುಗಳು ಬಗ್ಗೆ ಚರ್ಚೆಗಳು ನಡೆಯಲಿವೆ. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯ ಮೊದಲ ಭೇಟಿ, ತಾಳ ಮದ್ದಳೆ, ಬೆಂಗಳೂರು ಸುತ್ತ ಮುತ್ತಣ ಚಾರಿತ್ರಿಕ ನೋಟ ಹಾಗೂ ಯಶವಂತ ಚಿತ್ತಾಲರ ಒಂದು ಕಥೆ ಆಧಾರಿತ ಮಾತು ಕತೆ ನಡೆಯಲಿದೆ.
ಸಾಹಿತ್ಯ ಹಬ್ಬದಲ್ಲಿ ಟಿ.ಪಿ. ಅಶೋಕ, ಟಿ.ಎನ್. ಸೀತಾರಾಂ, ಶಿವಾರೆಡ್ಡಿ, ವಸುಧೇಂದ್ರ, ಸುಂದರರಾಜ್, ಶ್ರೀನಿವಾಸ ಜಿ. ಕಪ್ಪಣ್ಣ, ವಿದ್ಯಾ ಅಕ್ಷರ, ಗಣೇಶ್ ನಿತ್ಯಾನಂದ್ ಶೆಟ್ಟಿ, ಅಮರ, ರಘುನಾಥ ಚ.ಹ., ವಿದ್ಯಾರಶ್ಮಿ ಧರ್ಮೇಂದ್ರ, ಸುಬ್ಬು ಹೊಲೆಯಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.