ಬೆಂಗಳೂರು: ‘ನಗರದಲ್ಲಿ ಹೊಸ ಇಂದಿರಾ ಕ್ಯಾಂಟೀನ್ ತೆರೆಯಲು ಹಾಗೂ ಹೊಸ ಮೆನು ಆರಂಭಿಸಲು ಟೆಂಡರ್ ಅಂತಿಮಗೊಳಿಸುವ ವಿಚಾರ ಸಚಿವ ಸಂಪುಟ ಮುಂದಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
‘ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಚಿವ ಸಂಪುಟ ಸಭೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಅಲ್ಲಿ ನಿರ್ಧಾರವಾದಂತೆ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.
ಈಗಾಗಲೇ ನಗರದಲ್ಲಿ ಸುಮಾರು 700 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಗುಂಡಿಗಳನ್ನೂ ದುರಸ್ತಿ ಮಾಡಲಾಗುತ್ತದೆ. ಅತ್ಯಾಧುನಿಕ ಕ್ಯಾಮೆರಾಗಳಿರುವ 15 ವಾಹನಗಳು ಮುಖ್ಯ ಹಾಗೂ ಉಪ ಮುಖ್ಯರಸ್ತೆಗಳಲ್ಲಿ ಸಂಚರಿಸಲಿವೆ. ದಿನವೊಂದಕ್ಕೆ ನಾಲ್ಕರಿಂದ ಐದು ತಾಸು, ಗಂಟೆಗೆ ಸುಮಾರು 5 ಕಿ.ಮೀ ವೇಗದಲ್ಲಿ ಸಂಚರಿಸುವ ವಾಹನ, ಗುಂಡಿಗಳು ಹಾಗೂ ರಸ್ತೆಯ ಸ್ಥಿತಿಯ ಮಾಹಿತಿ ನೀಡಲಿದೆ. ಇದರಿಂದ ರಸ್ತೆಗಳ ನಿರ್ವಹಣೆ ಉತ್ತಮವಾಗಲಿದೆ ಎಂದು ಹೇಳಿದರು.