ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆಗಳ ಬಳಿ ಜನಸಂದಣಿ ಉಂಟಾಗುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿಯು ಇಂತಹ ಮಳಿಗೆಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಚಿಲ್ಲರೆ ಮಾರಾಟ ಮಳಿಗೆಗಳು ಉತ್ಪನ್ನಗಳ ಮಾರಾಟ ಉತ್ತೇಜನಕ್ಕಾಗಿ ವಿಶೇಷ ಕೊಡುಗೆಗಳನ್ನು ನೀಡುವಂತಿಲ್ಲ. ಮಾರಾಟ ಮೇಳಗಳನ್ನು ಹಮ್ಮಿಕೊಳ್ಳುವಂತಿಲ್ಲ.
ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಅದರ ಪ್ರಮುಖ ಅಂಶಗಳು ಇಂತಿವೆ.
* ಮಳಿಗೆಗಳ ಬಳಿ ಜನಜಂಗುಳಿ ಸೇರಲು ಕಾರಣವಂತಹ ‘ಕೊಡುಗೆ’ಗಳನ್ನು ನೀಡಬಾರದು.
* ನಿರ್ದಿಷ್ಟ ಕಾಲಮಿತಿಯಯೊಳಗೆ ಬಳಸಬಹುದಾದ ಟೋಕನ್ಗಳನ್ನು ನೀಡುವ ಮೂಲಕ ಮಳಿಗೆಯಲ್ಲಿ ಗ್ರಾಹಕರ ದಟ್ಟಣೆ ಉಂಟಾಗುವುದನ್ನು ತಡೆಯಬಹುದು. ನಿರ್ಬಂಧದ ಆದೇಶ ಜಾರಿಯಲ್ಲಿದ್ದರೂ ಜನರಿಗೆ ಅವಶ್ಯಕ ಸಾಮಗ್ರಿ ಸಿಗಬೇಕು ಎಂಬ ಕಾರಣಕ್ಕೆ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
* ಗ್ರಾಹಕರ ಬಳಕೆಗಾಗಿ ಸ್ಯಾನಿಟೈಸರ್ಗಳನ್ನು ಮಳಿಗೆಗಳಲ್ಲಿ ಒದಗಿಸಬೇಕು.
* ಮಳಿಗೆಯಲ್ಲಿ ಗ್ರಾಹಕರು ಕೈಯಿಂದ ಮುಟ್ಟುವಂತಹ ರೇಲಿಂಗ್, ಬಾಗಿಲ ಕೈಹಿಡಿ, ನೆಲ, ಬಿಲ್ಲಿಂಗ್ ಕೌಂಟರ್ಗಳ ಮೇಲ್ಮೈ ಮುಂತಾದ ಸ್ಥಳಗಳನ್ನು ಸೋಡಿಯಂ ಹೈಪೋಕ್ಲೋರೈಟ್ನಿಂದ ಅಥವಾ ಬ್ಲೀಚಿಂಗ್ ಪೌಡರ್ನಿಂದ ತಯಾರಿಸಿದ ದ್ರಾವಣದಿಂದ ಆಗಾಗ ಸ್ವಚ್ಛಗೊಳಿಸಬೇಕು.
* ಸಿಬ್ಬಂದಿಯೂ ವೈಯಕ್ತಿಕ ಸ್ವಚ್ಛತೆಗೆ ಗಮನ ಹರಿಸಬೇಕು. ಸಿಬ್ಬಂದಿಗಳೆಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು. ಸೋಂಕಿನ ಲಕ್ಷಣಗಳಿರುವ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವ ಸಿಬ್ಬಂದಿಗೆ ಅಸೌಖ್ಯದ ರಜೆ ಮಂಜೂರು ಮಾಡಿ ಚಿಕಿತ್ಸೆ ಪಡೆಯುವಂತೆ ಸೂಚಿಸಬೇಕು.
* ಗ್ರಾಹಕರು ಉತ್ಪನ್ನಗಳನ್ನು ಮುಟ್ಟುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಉತ್ಪನ್ನ ತೆಗೆದುಕೊಡಲು ಸಿಬ್ಬಂದಿಯನ್ನು ನಿಯೋಜಿಸಬೇಕು.
* ಬಿಲ್ಲಿಂಗ್ ಕೌಂಟರ್ನಲ್ಲಿ ಗ್ರಾಹಕರ ದಟ್ಟಣೆ ಕಡಿಮೆಗೊಳಿಸಲು, ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕು. ವಾರಾಂತ್ಯದಲ್ಲಿ ಹೆಚ್ಚುವರಿ ಕೌಂಟರ್ಗಳನ್ನು ವ್ಯವಸ್ಥೆ ಮಾಡಬೇಕು.