ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಜೆಟ್ ಮಂಡನೆ ವೇಳೆ ವಕೀಲರೊಬ್ಬರು ಅಕ್ರಮವಾಗಿ ಪ್ರವೇಶಿಸಿ ಶಾಸಕರ ಕುರ್ಚಿಯಲ್ಲಿ ಕುಳಿತಿದ್ದ ಪ್ರಕರಣದ ನಂತರ, ವಿಧಾನಸೌಧ ಹಾಗೂ ಸುತ್ತಮುತ್ತ ಭದ್ರತೆ ಹೆಚ್ಚಾಗಿದೆ. ಭದ್ರತಾ ಸಿಬ್ಬಂದಿ, ಪ್ರತಿಯೊಬ್ಬರ ಮೇಲೆ ನಿಗಾ ವಹಿಸಿ ತಪಾಸಣೆ ನಡೆಸುತ್ತಿದ್ದಾರೆ.
ತಪಾಸಣೆ ಸಂದರ್ಭದಲ್ಲಿ ಹಲವರ ಬಳಿ ನಕಲಿ ಪಾಸ್ ಹಾಗೂ ನಕಲಿ ಗುರುತಿನ ಚೀಟಿಗಳು ಪತ್ತೆಯಾಗುತ್ತಿವೆ. ಅವುಗಳನ್ನು ಜಪ್ತಿ ಮಾಡುತ್ತಿರುವ ಪೊಲೀಸರು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ.
'ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಭದ್ರತೆ ಹೆಚ್ಚಿಸಲಾಗಿದೆ. ಹಲವರು, ಬಣ್ಣದ ಜೆರಾಕ್ಸ್ ಪಾಸ್, ಉದ್ಯೋಗಿ ನಕಲಿ ಗುರುತಿನ ಚೀಟಿ ಹಾಗೂ ಶಾಸಕರ ಹೆಸರಿನಲ್ಲಿ ನಕಲಿ ಪಾಸ್ಗಳನ್ನು ಸೃಷ್ಟಿಸಿದ್ದಾರೆ. ಅವುಗಳನ್ನು ಬಳಸಿ ವಿಧಾನಸೌಧದೊಳಗೆ ಅಕ್ರಮವಾಗಿ ಪ್ರವೇಶಿಸುತ್ತಿರುವುದು ಪತ್ತೆಯಾಗಿದೆ. ಎಲ್ಲರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ' ಎಂದು ಪೊಲೀಸರು ಹೇಳಿದರು.
'50ಕ್ಕೂ ಹೆಚ್ಚು ಪಾಸ್ ಹಾಗೂ ನಕಲಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ. ವೈಯಕ್ತಿಕ ಕೆಲಸ ಹಾಗೂ ಬೇರೆಯವರನ್ನು ವಂಚಿಸುವ ಉದ್ದೇಶದಿಂದ ಹಲವರು ಈ ಕೃತ್ಯ ಎಸಗುತ್ತಿದ್ದಾರೆ. ಕೆಲವರನ್ನು ಪಡೆದು ವಿಚಾರಣೆ ನಡೆಸಲಾಗುವುದು' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.