ಬೆಂಗಳೂರು: ಸಚಿವ ಡಾ.ಜಿ.ಪರಮೇಶ್ವರ ಅವರ ಬೆಂಗಳೂರಿನ ಸದಾಶಿವನಗರದ ಮನೆಗೆ ಭಾನುವಾರ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ಗೃಹ ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿರುವ ಬೆನ್ನಲ್ಲೇ ಶ್ರೀಗಳ ಭೇಟಿ ಕುತೂಹಲ ಮೂಡಿಸಿತ್ತು. ಪರಮೇಶ್ವರ ದಂಪತಿ ಶ್ರೀಗಳಿಗೆ ಫಲತಾಂಬೂಲ ನೀಡಿ ನಮಸ್ಕರಿಸಿದರು.
ನಂತರ ಮಾತನಾಡಿದ ಪರಮೇಶ್ವರ, ಯಶಸ್ವಿಯಾಗಿ ಸರ್ಕಾರ ನಡೆಸಲು ಎಲ್ಲರ ಸಹಕಾರ ಅಗತ್ಯ. ಯಾವ ಸಂಘಟನೆಗಳನ್ನೂ ನಿಷೇಧಿಸುವ ಪ್ರಶ್ನೆ ಸದ್ಯಕ್ಕೆ ಇಲ್ಲ. ಕಾನೂನು ಉಲ್ಲಂಘಿಸುವ ಸಂಘಟನೆಗಳ ವಿರುದ್ಧ ಕ್ರಮ ಖಚಿತ. ನಿಯಮಕ್ಕೆ ಅನುಗುಣವಾಗಿ ನಡೆಯುವ ಸಂಘಟನೆಗಳನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳ ಜಾರಿಗೆ ಚೌಕಟ್ಟು ರೂಪಿಸಲಾಗುತ್ತಿದೆ. ಶೀಘ್ರ ಜಾರಿಗೊಳಿಸಲಾಗುವುದು. ಈ ವಿಚಾರದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿವೆ ಎಂದರು.
ಖಾತೆಗಳ ಅಧಿಕೃತ ಹಂಚಿಕೆಯಾಗದಿದ್ದರೂ ಕಮಲ್ ಪಂಥ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಪರಮೇಶ್ವರ್ ಮನೆಗೆ ಭೇಟಿ ನೀಡಿ ಶುಭಾಶಯ ಕೋರಿದರು.