ಬೆಂಗಳೂರು: ದೇವನಹಳ್ಳಿ ಬಳಿ ಕನ್ನಮಂಗಲ ಗೇಟ್ ಸಮೀಪದಲ್ಲಿ ‘ಕೆಫೆ ರನ್ವೇ’ ಮಳಿಗೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಹುಕ್ಕಾ ಮಾರುತ್ತಿದ್ದ ಆರೋಪದಡಿ ವ್ಯವಸ್ಥಾಪಕ ಸೇರಿ ಮೂವರನ್ನು ಬಂಧಿಸಿದ್ದಾರೆ.
‘ವ್ಯವಸ್ಥಾಪಕ ಅತೀಕ್ ವುರ್ ರೆಹಮಾನ್ (25), ಕೆಲಸಗಾರರಾದ ಅಯೂಬ್ ಖಾನ್ (26), ಗಣೇಶ್ (19) ಬಂಧಿತರು. ಮಳಿಗೆಯಲ್ಲಿ ಹುಕ್ಕಾ ಚಿಲುಮೆಗಳು, ಸಿಗರೇಟ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ತಿಳಿಸಿದರು.
‘ವಾಸೀಂ ಅಹಮ್ಮದ್ ಹಾಗೂ ಮಹಮ್ಮದ್ ಸಲ್ಮಾನ್ ಎಂಬುವರು ‘ಕೆಫೆ ರನ್ವೇ’ ನಡೆಸುತ್ತಿದ್ದರು. ಸದ್ಯ ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಯುವಕ–ಯುವತಿಯರಿಗೆ ಹುಕ್ಕಾ ಮಾರಲಾಗುತ್ತಿತ್ತು’ ಎಂದೂ ಹೇಳಿದರು.