ಬೆಂಗಳೂರು: ಬಿಬಿಎ ವಿದ್ಯಾರ್ಥಿನಿ ಪ್ರಭುದ್ಯಾ (20) ಕೊಲೆ ಆರೋಪದಡಿ ಇಬ್ಬರನ್ನು ವಶಕ್ಕೆ ಪಡೆದಿರುವ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.
ಬೃಂದಾವನ ಲೇಔಟ್ನಲ್ಲಿರುವ ಮನೆಯೊಂದರಲ್ಲಿ ಪ್ರಭುದ್ಯಾ ಮೃತಪಟ್ಟಿದ್ದರು. ಅನುಮಾನಾಸ್ಪದ ಸಾವು ಆರೋಪದಡಿ ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ಆರೋಪದಡಿ ತಾಯಿ ದೂರು ನೀಡಿದ್ದರು. ಕೊಲೆ ಪ್ರಕರಣವಾಗಿ ಪರಿಗಣಿಸಿ ತನಿಖೆ ನಡೆಸುತ್ತಿರುವ ಪೊಲೀಸರು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
‘ಮನೆ ಅಕ್ಕ–ಪಕ್ಕದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳೀಯರ ಹೇಳಿಕೆ ಆಧರಿಸಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಬ್ಬಾತ ಬಾಲಕ. ಇಬ್ಬರನ್ನೂ ವಿಚಾರಣೆಗೆಂದು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಪ್ರಭುದ್ಯಾ ಅವರ ಕೈ ಹಾಗೂ ಕತ್ತಿನಲ್ಲಿ ಗಾಯವಾಗಿದೆ. ಹೀಗಾಗಿ, ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ. ವಶಕ್ಕೆ ಪಡೆದಿರುವ ಇಬ್ಬರಿಗೂ ಹಾಗೂ ಪ್ರಭುದ್ಯಾ ಸಾವಿಗೂ ಏನಾದರೂ ಸಂಬಂಧವಿದೆಯಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ತಿಳಿಸಿವೆ.