ಬೆಂಗಳೂರು: ‘ಕನ್ನಡ ಭಾಷೆಯಲ್ಲಿ ವಿಶ್ವಕ್ಕೆ ಬೇಕಾದ ಅಪಾರ ಜ್ಞಾನ ಸಂಪತ್ತಿದೆ. ಅದನ್ನು ಬೇರೆ ಭಾಷೆಗಳಿಗೆ ತಲುಪಿಸುವ ಕೆಲಸವಾಗಬೇಕು’ ಎಂದು ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣಭಾನುವಾರ ಅಭಿಪ್ರಾಯಪಟ್ಟರು.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಕನ್ನಡ ಬಾವುಟ ಹಾರಿಸಿದವರು ಉಪನ್ಯಾಸ ಮಾಲೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಚಳವಳಿಯ ದಿಕ್ಕು ಬದಲಾಗಬೇಕು. ರಾ.ಹ.ದೇಶಪಾಂಡೆ, ಅನ್ನದಾನಪ್ಪ ದೊಡ್ಡಮೇಟಿ, ಮ.ರಾಮಮೂರ್ತಿ, ಶಾಂತವೇರಿ ಗೋಪಾಲಗೌಡ ಅವರೂ ಹಿಂದೆ ಭಾಷೆಗಾಗಿ ಹೋರಾಟ ನಡೆಸಿದ್ದರು. ಅವರು ಶ್ರಮಿಸಿದ ಮಾರ್ಗವನ್ನು ಇಂದಿನ ಚಳವಳಿಗಾರರು ಅನುರಿಸಬೇಕು’ ಎಂದರು.
‘ಕರ್ನಾಟಕಕ್ಕೆ ವಲಸೆ ಬಂದಿರುವವರಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು. ಈ ಬಗ್ಗೆ ಸರ್ಕಾರ, ಕನ್ನಡ ಹೋರಾಟಗಾರರು ಚಿಂತನೆ ನಡೆಸಬೇಕು’ ಎಂದರು.
ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ,ಶಾಸನ ತಜ್ಞ ಡಾ.ಆರ್.ಶೇಷಶಾಸ್ತ್ರಿ, ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ ಮತ್ತಿತರರು ಇದ್ದರು.