ಬೆಂಗಳೂರು: ‘ಶೌಚಗುಂಡಿ ಸ್ವಚ್ಛತಾ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇರುವ ಸೌಲಭ್ಯಗಳು ಸಿಗದಿರಲು ಪಾಲಿಕೆಯ ವಿಳಂಬ ಧೋರಣೆಯೇ ಕಾರಣ’ ಎಂದು ಆರೋಪಿಸಿ ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿ ಸಂಘದ ನೇತೃತ್ವದಲ್ಲಿಶೌಚಗುಂಡಿ ಸ್ವಚ್ಛತಾ ಕಾರ್ಮಿಕರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
‘ಸಫಾಯಿ ಕರ್ಮಚಾರಿ ಫಲಾನುಭವಿಗಳಿಗೆ ಎಲ್ಲ ಸೌಲಭ್ಯ ಒದಗಿಸುವುದಾಗಿ ಸುಪ್ರೀಂಕೋರ್ಟ್ ಮುಂದೆಪಾಲಿಕೆ ಒಪ್ಪಿಕೊಂಡಿತ್ತು. ಆದರೆ, ಈವರೆಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಫಲಾನುಭವಿಗಳ ಪಟ್ಟಿ ಮತ್ತು ಕಡತಗಳನ್ನು ನವದೆಹಲಿಯ ಎನ್ಎಸ್ಕೆಡಿಸಿ ಕಚೇರಿಗೂ ಕಳುಹಿಸಿಲ್ಲ’ ಎಂದುಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿ ಸಂಘದ ಬೆಂಗಳೂರು ಘಟಕದ ಅಧ್ಯಕ್ಷಜಿ.ಎನ್.ನಾಗೇಂದ್ರ ಆರೋಪಿಸಿದರು.
‘ಸೌಲಭ್ಯಕ್ಕಾಗಿ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಕಡತಗಳು ಕಾಣೆಯಾಗಿವೆ. ಮತ್ತೊಮ್ಮೆ ಸಲ್ಲಿಸಿ’ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಕೋಟಿಗಟ್ಟಲೆ ಅನುದಾನ ಫಲಾನುಭವಿಗಳ ಕೈಸೇರಬಾರದು ಎಂದು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಷಡ್ಯಂತ್ರ ನಡೆಸಿದ್ದಾರೆ. ಈ ವಿಳಂಬ ಧೋರಣೆಯಿಂದಾಗಿ ನಗರದ ಸಫಾಯಿ ಕರ್ಮಚಾರಿಗಳು ಈಗಲೂ ಸೌಲಭ್ಯ ವಂಚಿತರಾಗಿ ಉಳಿದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಪಾಲಿಕೆ ಈ ಕೂಡಲೇ ಸಫಾಯಿ ಕರ್ಮಚಾರಿಗಳಿಗೆ ಅನುದಾನ ಬಿಡುಗಡೆ, ಗುರುತಿನ ಚೀಟಿ ವಿತರಣೆ ಸೇರಿದಂತೆ ಸರ್ಕಾರಗಳಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ನಮ್ಮ ಬೇಡಿಕೆಗಳು ಈಡೇರದಿದ್ದರೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದೂ ಎಚ್ಚರಿಸಿದರು.