ಪೀಣ್ಯ ದಾಸರಹಳ್ಳಿ: ರುಕ್ಮಿಣಿನಗರ ಮುಖ್ಯರಸ್ತೆಯಲ್ಲಿ ತೆರೆದ ರಾಜಕಾಲುವೆಗೆ ಜಾರಿ ಬಿದ್ದು ಮೃತಪಟ್ಟಿದ್ದ ವೆಂಕಟೇಶ್ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ದಾಸರಹಳ್ಳಿ ವಲಯ ಬಿಬಿಎಂಪಿ ಕಚೇರಿ ಎದುರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಲಾಯಿತು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಬ್ಬಾಳು ಗ್ರಾಮದ ವೆಂಕಟೇಶ್ ಅವರ ಸಾವಿಗೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆಪಾದಿಸಿದರು.
ಮೂರು ತಿಂಗಳ ಹಿಂದೆ ರಾಜಕಾಲುವೆ ಹೂಳು ತೆಗೆಯುವ ವೇಳೆ ಚಪ್ಪಡಿ ತೆಗೆಯಲಾಗಿತ್ತು. ಆದರೆ, ನಂತರ ಕಾಮಗಾರಿ ಮುಗಿದ ಮೇಲೆ ಚಪ್ಪಡಿ ಹಾಕದೇ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪ್ರತಿಭಟಿಸಿದರು.
ಬಿಬಿಎಂಪಿ ಅಧಿಕಾರಿಗಳಾ ಗಲಿ, ಸ್ಥಳೀಯ ಶಾಸಕರಾಗಲಿ ವಿಷಯ ತಿಳಿಸಿದ್ದರೂ ಸ್ಥಳಕ್ಕೆ ಬಾರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಿಬಿಎಂಪಿ ಮೂಲಕ ಪರಿಹಾರ ನೀಡಬೇಕು ಎಂದು ಎಎಪಿ ಮುಖಂಡರು ಆಗ್ರಹಿಸಿದರು.
ಸುಮಾರು 2 ಗಂಟೆಯ ನಂತರ ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಯೊಬ್ಬರು ಪ್ರತಿಭಟನಕಾರರ ಮನವೊಲಿಸಿ ₹ 10 ಸಾವಿರ ನೀಡಿ, ಮುಂದೆ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಇದಕ್ಕೆ ಒಪ್ಪಿದ ಪ್ರತಿಭಟನಕಾರರು ಪರಿಹಾರ ನೀಡದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.