ಬೆಂಗಳೂರು:ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿಸಲಾಗಿರುವ ಅಭ್ಯರ್ಥಿ ಜಿ.ಸಿ. ರಾಘವೇಂದ್ರ ಅವರನ್ನು ನಾಲ್ಕು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ.
ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಬಂಧಿಸಲಾಗಿದ್ದ ರಾಘವೇಂದ್ರ, ಸೂರ್ಯನಾರಾಯಣ ಹಾಗೂ ಜಿ.ಆರ್. ಮನುಕುಮಾರ್ ಅವರನ್ನು ತನಿಖಾಧಿಕಾರಿ ಬಿ.ಕೆ. ಶೇಖರ್ ನೇತೃತ್ವದ ಸಿಐಡಿ ತಂಡ ನ್ಯಾಯಾಲಯಕ್ಕೆ ಗುರುವಾರ ಹಾಜರುಪಡಿಸಿತು.
‘ರಾಘವೇಂದ್ರ ಪರೀಕ್ಷೆ ಬರೆದಿದ್ದ ಕೇಂದ್ರದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಬೇಕಿದೆ. ಹೀಗಾಗಿ, ಕಸ್ಟಡಿಗೆ ನೀಡಬೇಕು’ ಎಂದು ಅಧಿಕಾರಿಗಳು ಕೋರಿದರು.
ನ್ಯಾಯಾಧೀಶ ಆನಂದ್ ಟಿ. ಚವ್ಹಾಣ್, ರಾಘವೇಂದ್ರ ಅವರನ್ನು 4 ದಿನ ಕಸ್ಟಡಿಗೆ ಒಪ್ಪಿಸಿದರು. ಇನ್ನಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.