ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿಯ ಕೊಲೆ: ಪತ್ನಿ ಸೇರಿ ಮೂವರ ಬಂಧನ

Last Updated 17 ಮೇ 2021, 15:59 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯವೂ ಕಿರುಕುಳ ನೀಡುತ್ತಿದ್ದಾನೆಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಿಸಿದ ಆರೋಪದಡಿ ಮಹಿಳೆ ಸೇರಿ ಮೂವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಟಿನ್‌ ಫ್ಯಾಕ್ಟರಿ ಹಿಂಭಾಗದ ದೂರವಾಣಿ ನಗರದ ನಿವಾಸಿ ಲೋಕನಾಥ್ (48) ಕೊಲೆಯಾದ ವ್ಯಕ್ತಿ. ಅವರ ಪತ್ನಿ ಯಶೋಧಾ (40), ಆಕೆಯ ಸ್ನೇಹಿತರಾದ ವಿಜಿನಾಪುರದ ಎಂ. ಮುನಿರಾಜು (33), ಕಸ್ತೂರಿನಗರದ ಪಿ. ಪ್ರಭು (27) ಬಂಧಿತರು.

‘ಬೈಯಪ್ಪನಹಳ್ಳಿ ಹಾಗೂ ಚನ್ನಸಂದ್ರ ರೈಲು ನಿಲ್ದಾಣಗಳ ನಡುವಿನ ಹಳಿ ಮೇಲೆ ಮೃತದೇಹ ಸಿಕ್ಕಿತ್ತು. ಅದರ ತನಿಖೆ ಕೈಗೊಂಡಾಗ ಕೊಲೆ ಎಂಬುದು ತಿಳಿಯಿತು. ಮೂವರು ಆರೋಪಿಗಳು ಸಿಕ್ಕಿಬಿದ್ದರು’ ಎಂದು ರೈಲ್ವೆ ಎಸ್ಪಿ ಡಿ.ಆರ್. ಸಿರಿಗೌರಿ ಹೇಳಿದರು.

‘ಕಾರ್ಮಿಕ ಲೋಕನಾಥ್, ಯಶೋಧಾ ಅವರನ್ನು ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆಕೆ ಸಹ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಳು. ಮದ್ಯವ್ಯಸನಿಯಾಗಿದ್ದ ಲೋಕನಾಥ್, ನಿತ್ಯ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಪತ್ನಿಗೆ ಹೊಡೆಯುವುದು, ಬೈಯುವುದು ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ.’

‘ಕಿರುಕುಳದಿಂದ ಬೇಸತ್ತ ಯಶೋಧಾ, ಪತಿಯನ್ನೇ ಕೊಲೆ ಮಾಡಿಸಲು ಮುಂದಾಗಿದ್ದಳು. ಸ್ನೇಹಿತ ಮುನಿರಾಜುವನ್ನು ಸಂಪರ್ಕಿಸಿ ಕೊಲೆ ಮಾಡುವಂತೆ ಹೇಳಿದ್ದರು’ ಎಂದೂ ತಿಳಿಸಿದರು.

ಮದ್ಯ ಕುಡಿಸಿ ಕೊಲೆ: ’ಲೋಕನಾಥ್‌ ಅವರಿಗೆ ಮೇ 15ರಂದು ಕರೆ ಮಾಡಿದ್ದ ಮುನಿರಾಜು ಹಾಗೂ ಪ್ರಭು, ಮದ್ಯದ ಪಾರ್ಟಿ ಮಾಡೋಣವೆಂದು ಕಸ್ತೂರಿನಗರದ ರೈಲ್ವೆ ಹಳಿ ಬಳಿ ಕರೆಸಿದ್ದರು. ಅಲ್ಲಿ ಲೋಕನಾಥ್ ಅವರಿಗೆ ಮದ್ಯ ಕುಡಿಸಿ, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಂದಿದ್ದರು’ ಎಂದೂ ಸಿರಿಗೌರಿ ಹೇಳಿದರು.

‘ಕೊಲೆ ಎಂಬುದು ಯಾರಿಗೂ ಗೊತ್ತಾಗಬಾರದೆಂದು ಮೃತದೇಹವನ್ನು ಹಳಿ ಮೇಲೆ ಎಸೆದು ಹೋಗಿದ್ದರು. ಮೃತದೇಹ ನೋಡಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT