ಬೆಂಗಳೂರು: ನಗರದ ಹಲವುಪ್ರದೇಶಗಳಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು. ನಗರದಲ್ಲಿ ಶನಿವಾರ ಸಂಜೆಯೂ ಉತ್ತಮ ಮಳೆಯಾಗಿತ್ತು.
ಸತತ ಎರಡು ದಿನವೂ ಮಳೆಯಾಗಿದ್ದರಿಂದ ನಗರದ ವಾತಾವರಣ ತುಸು ತಂಪಾಗಿದೆ.ಬೇಸಿಗೆಯ ಬೇಗೆಯಿಂದ ಬಳಲಿದ್ದ ನಗರದ ಜನತೆಗೆ ಈ ಮಳೆ ನೆಮ್ಮದಿ ತಂದಿದೆ.
ನಗರದ ಹಲವು ಪ್ರದೇಶಗಳಲ್ಲಿ ಭಾನುವಾರ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಂಡುಬಂತು. ಬೆಳಿಗ್ಗೆಯಿಂದಲೇ ತಂಪಿನ ಗಾಳಿಯೂ ಬೀಸುತ್ತಿತ್ತು. ಆಗಾಗ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಮಧ್ಯಾಹ್ನದ ವೇಳೆ ಜೋರು ಗಾಳಿ ಬೀಸಲಾರಂಭಿಸಿತ್ತು. ಸಂಜೆ ವೇಳೆ ಹಲವೆಡೆ ತುಂತುರು ಮಳೆಯಾಯಿತು. ಕೆಲವೆಡೆ, ಅಬ್ಬರದ ಮಳೆಯಾಯಿತು.
ರಾಜಾಜಿನಗರ, ವಿಜಯನಗರ, ಯಶವಂತಪುರ, ಬಾಗಲಗುಂಟೆ, ಪೀಣ್ಯ, ವಿದ್ಯಾರಣ್ಯಪುರ, ಜಾಲಹಳ್ಳಿ, ಗೊರಗುಂಟೆಪಾಳ್ಯ. ಲಗ್ಗೆರೆ ಹಾಗೂ ಬೆಂಗಳೂರು ಉತ್ತರ ಭಾಗದ ಬಹುತೇಕ ಕಡೆ ಮಳೆ ಸುರಿಯಿತು.
‘ಜೋರಾಗಿ ಬೀಸಿದ್ದ ಗಾಳಿಯಿಂದ ಕೆಲವೆಡೆ ಮರದ ಕೊಂಬೆಗಳು ಬಿದ್ದಿದ್ದವು. ಸ್ಥಳೀಯರ ಜೊತೆ ಸೇರಿ ಸಿಬ್ಬಂದಿ ಕೊಂಬೆಗಳನ್ನು ತೆರವು ಮಾಡಿದ್ದಾರೆ. ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.