ಬೆಂಗಳೂರು: ಮಳೆ ನೀರು ಮರುಪೂರಣ ಪದ್ಧತಿ ಅಳವಡಿಕೊಳ್ಳುವುದನ್ನು ಪ್ರೋತ್ಸಾಹಿಸಲು ಅಪಾರ್ಟ್ಮೆಂಟ್, ವಾಣಿಜ್ಯ ಮಳಿಗೆ, ಕೈಗಾರಿಕೆಗಳಿಗೆ ‘ಗ್ರೀನ್ ಸ್ಟಾರ್ ರೇಟಿಂಗ್’ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಷನ್ ಶನಿವಾರ ಆಯೋಜಿಸಿದ್ದ ‘ಸೌತ್ ಜೋನ್’ ಸಭೆಯಲ್ಲಿ ಅವರು ನಿವಾಸಿಗಳೊಂದಿಗೆ ಸಂವಾದ ನಡೆಸಿದರು.
‘ನಗರ 15 ವರ್ಷಗಳಲ್ಲಿ 50 ವರ್ಷಗಳ ಬೆಳವಣಿಗೆಯನ್ನು ಕಂಡಿದೆ. 1.40 ಕೋಟಿಯಷ್ಟು ಜನಸಂಖ್ಯೆಗೆ ಪ್ರತಿ ದಿನ 145 ಕೋಟಿ ಲೀಟರ್ಗಳಷ್ಟು ಕಾವೇರಿ ನೀರು ಒದಗಿಸುತ್ತಿದ್ದೇವೆ. ಇದಲ್ಲದೇ ಬೋರ್ವೆಲ್ಗಳ ಮೂಲಕ ಜನರು ನೀರಿನ ಅಗತ್ಯವನ್ನು ಪೂರೈಸಿಕೊಳ್ಳುತ್ತಿದ್ದರು. ಆದರೆ ಅಂತರ್ಜಲ ಮಟ್ಟ ಕುಸಿತವಾಗಿರುವುದರಿಂದ ಅವರೆಲ್ಲರೂ ಕಾವೇರಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಇದರಿಂದ ನಮ್ಮ ವಿತರಣಾ ವ್ಯವಸ್ಥೆಯ ಮೇಲೆ ಒತ್ತಡ ಬಿದ್ದಿದೆ’ ಎಂದರು.
‘ಭವಿಷ್ಯದ ಅನುಕೂಲಕ್ಕಾಗಿ, ನಗರದಲ್ಲಿ ಬೀಳುವ ಮಳೆಯ ನೀರನ್ನು ಇಂಗುವಂತೆ ಮಾಡುವುದು ಬಹಳ ಅಗತ್ಯ. ಮಳೆ ನೀರು ಮರುಪೂರಣ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದೆ ಇರುವುದರಿಂದ ಮಳೆ ಸಂದರ್ಭದಲ್ಲಿ ನಮ್ಮ ಒಳಚರಂಡಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಪ್ರವಾಹ ಪರಿಸ್ಥಿತಿಯೂ ಉಂಟಾಗುತ್ತಿದೆ’ ಎಂದರು.
‘ಹಲವಾರು ಅಪಾರ್ಟ್ಮೆಂಟ್ಗಳಲ್ಲಿ ಮಳೆ ನೀರು ಮರುಪೂರಣ ವ್ಯವಸ್ಥೆ ಪರಿಣಾಮಕಾರಿಯಾಗಿ ಅಳವಡಿಕೆಯಾಗಿಲ್ಲ. ಈ ಪದ್ಧತಿ ಅಳವಡಿಕೆಯಿಂದ ಜಲಕ್ಷಾಮ ಉಂಟಾಗುವುದಿಲ್ಲ. ಅದಕ್ಕಾಗಿ ಅಪಾರ್ಟ್ಮೆಂಟ್ಗಳಿಗೆ ಅವುಗಳ ಮಳೆ ಮರುಪೂರಣ ವ್ಯವಸ್ಥೆಯ ಆಧಾರದ ಮೇಲೆ ‘ಗ್ರೀನ್ ಸ್ಟಾರ್ ರೇಟಿಂಗ್’ ನೀಡಲು ಜಲಮಂಡಳಿ ಚಿಂತನೆ ನಡೆಸಿದೆ’ ಎಂದರು.
‘ಅಪಾರ್ಟ್ಮೆಂಟ್ಗಳಲ್ಲಿ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಬೇರೆಯವರಿಗೆ ನೀಡಲು ಅನುಮತಿ ಕೊಡಲಾಗುತ್ತದೆ. ಮುಖ್ಯಮಂತ್ರಿಯವರು ಆಯವ್ಯಯದಲ್ಲಿ ಈ ಬಗ್ಗೆ ಪ್ರಕಟಿಸಿದ್ದಾರೆ. ಏಪ್ರಿಲ್ 1ರಂದು ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗುವುದು’ ಎಂದು ನಿವಾಸಿಗಳ ಪ್ರಶ್ನೆಗೆ ಉತ್ತರಿಸಿದರು.
ಸಂವಾದದಲ್ಲಿ ಫೆಡರೇಷನ್ನ ಅಧ್ಯಕ್ಷ ಅರುಣ್ಕುಮಾರ್, ಉಪಾಧ್ಯಕ್ಷ ಸತೀಶ್ ಮಲ್ಯ ಉಪಸ್ಥಿತರಿದ್ದರು.