ಬೆಂಗಳೂರು:ತುಮಕೂರು ರಸ್ತೆ8ನೇ ಮೈಲಿ ಜಂಕ್ಷನ್ನಿಂದ ನೆಲಗದರನಹಳ್ಳಿ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಸಿಗುವ ರಾಜಕಾಲುವೆ ಕುಸಿಯುವ ಹಂತದಲ್ಲಿದ್ದು, ಆತಂಕದ ನಡುವೆ ಸವಾರರು ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ.
ಹೆದ್ದಾರಿಯಿಂದ ಬೆಲ್ಮಾರ್ ಲೇಔಟ್, ರುಕ್ಮಿಣಿನಗರ, ನೆಲಗದರನಹಳ್ಳಿ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.
ರಾಜಕಾಲುವೆ ಕುಸಿಯುವ ಜತೆಗೆ ಈ ರಸ್ತೆಗೆ ಇರುವ ಸೇತುವೆ ಕೂಡ ನೆಲಸಮ ಆಗುವ ಅಪಾಯ ಇದೆ. ಕಳೆದ ಸಾಲಿನಲ್ಲಿ ಚೊಕ್ಕಸಂದ್ರ ಕರೆ ಒಡೆದು ನುಗ್ಗಿದ ನೀರು ಈ ರಾಜಕಾಲುವೆಯಲ್ಲಿ ಸರಾಗವಾಗಿ ಸಾಗದೆ ರುಕ್ಮಿಣಿನಗರ, ಬೆಲ್ಮಾರ್ ಲೇಔಟ್ ಮತ್ತು ಸುತ್ತಮುತ್ತಲ ಬಡಾವಣೆಗಳನ್ನು ಜಲಾವೃತ ಆಗುವಂತೆ ಮಾಡಿತ್ತು.
‘ಈ ಬಾರಿ ಜೋರು ಮಳೆ ಬಂದರೆ ಮತ್ತೊಮ್ಮೆ ನೀರು ತುಂಬಿಕೊಳ್ಳುವ ಆತಂಕ ಸ್ಥಳೀಯರದ್ದು. ಅಲ್ಲದೇ ವಾಹನಗಳು ಸಾಗುವಾಗ ರಾಜಕಾಲುವೆ ಸೇತುವೆ ಕುಸಿದರೆ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ. ಆದ್ದರಿಂದ ರಾಜಕಾಲುವೆಯನ್ನು ಕೂಡಲೇ ದುರಸ್ತಿ ಮಾಡಬೇಕು. ಕುಸಿಯುವ ಹಂತದಲ್ಲಿರುವ ಸೇತುವೆ ಒಡೆದು ಹೊಸದಾಗಿ ನಿರ್ಮಿಸಬೇಕು’ ಎಂದು ರುಕ್ಮಿಣಿನಗರದ ನಿವಾಸಿಗಳು ಆಗ್ರಹಿಸಿದ್ದಾರೆ.