ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಮೊಬೈಲ್ ಸರ್ಕಿಟ್ ಪತ್ತೆಯಾಗಿದ್ದು, ಇದನ್ನು ಬಳಸಿ ಬಾಂಬ್ ಸ್ಫೋಟಿಸಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ.
ಸ್ಫೋಟದ ಬಗ್ಗೆ ತನಿಖೆ ಮುಂದುವರಿಸಿರುವ ಎನ್ಐಎ ಹಾಗೂ ಸಿಸಿಬಿ ಅಧಿಕಾರಿಗಳು, ಆರೋಪಿಯ ಬೆನ್ನು ಬಿದ್ದಿದ್ದಾರೆ. ಜೊತೆಗೆ, ಘಟನಾ ಸ್ಥಳದಲ್ಲಿ ಸಿಕ್ಕಿರುವ ವಸ್ತುಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು, ಕೆಫೆ ಒಳಗೆ ಹಾಗೂ ಹೊರಗಿನ ಭಾಗದಲ್ಲಿ ಶೋಧ ನಡೆಸಿದ್ದರು. ಮೊಬೈಲ್ ಸರ್ಕಿಟ್, ತಂತಿಗಳು, ಬೋಲ್ಟ್, ಬ್ಯಾಟರಿ ಹಾಗೂ ಮೊಳೆಗಳು ಪತ್ತೆಯಾಗಿರುವುದಾಗಿ ಮೂಲಗಳು ಹೇಳಿವೆ.
‘ಮೊಬೈಲ್ ಸರ್ಕಿಟ್ ಬಳಸಿಕೊಂಡು ಕಚ್ಚಾ ಬಾಂಬ್ (ಐಇಡಿ) ತಯಾರಿಸಿದ್ದ ದುಷ್ಕರ್ಮಿ, ಅದನ್ನೇ ಕೆಫೆಯಲ್ಲಿ ಇರಿಸಿ ಹೋಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ಅಡುಗೆ ಅನಿಲ ಸೋರಿಕೆ ವದಂತಿ: ಕೆಫೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ್ದ ಬಗ್ಗೆ ವದಂತಿ ಹರಡಿತ್ತು. ಬೆಂಕಿ ಕೆನ್ನಾಲಗೆ ಹಾಗೂ ದಟ್ಟ ಹೊಗೆ ಇದ್ದಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು. ಆದರೆ, ಅಡುಗೆ ಅನಿಲ ಸೋರಿಕೆ ಬಗ್ಗೆ ಯಾವುದೇ ಪುರಾವೆ ಲಭ್ಯವಾಗಲಿಲ್ಲ.
‘ಸ್ಫೋಟಕ್ಕೆ ಕಾರಣ ಗೊತ್ತಾಗಿರಲಿಲ್ಲ. ಬೆಂಕಿ ನಂದಿಸಿದ ನಂತರ, ಘಟನಾ ಸ್ಥಳದಲ್ಲಿ ಹಲವು ಅನುಮಾನಾಸ್ಪದ ವಸ್ತುಗಳು ಸಿಕ್ಕವು. ಆಗಲೇ ಇದೊಂದು ಬಾಂಬ್ ಸ್ಫೋಟ ಎಂಬುದು ತಿಳಿಯಿತು’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.
ರಾಜ್ಯಪಾಲರ ಭೇಟಿ: ಸ್ಫೋಟದ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.