ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ | ಮತ್ತೆ ಮೂವರ ವಶ: ರಾಜ್ಯದಲ್ಲಿ ಕಟ್ಟೆಚ್ಚರ

Published 8 ಮಾರ್ಚ್ 2024, 23:50 IST
Last Updated 8 ಮಾರ್ಚ್ 2024, 23:50 IST
ಅಕ್ಷರ ಗಾತ್ರ

ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದ’ ಅನುಮಾನದ ಮೇರೆಗೆ ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್‌ನನ್ನು (26) ಕಸ್ಟಡಿಗೆ ಪಡೆದಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ಮತ್ತೆ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಶಂಕಿತರು ಮತ್ತೊಂದು ಸ್ಫೋಟಕ್ಕೆ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತನಿಖಾ ಸಂಸ್ಥೆಗಳು, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ತನಿಖಾ ಸಂಸ್ಥೆಗಳ ಮಾಹಿತಿಯಿಂದ ಎಚ್ಚೆತ್ತಿರುವ ರಾಜ್ಯದ ಆಯಾ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸರು, ತಮ್ಮ ವ್ಯಾಪ್ತಿಯ ದೇವಸ್ಥಾನಗಳು ಹಾಗೂ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಶುಕ್ರವಾರ ಮಹಾ ಶಿವರಾತ್ರಿ ಹಬ್ಬದ ಇದ್ದಿದ್ದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಶಿವನ ದೇವಸ್ಥಾನದಲ್ಲಿ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದರು. ಜೊತೆಗೆ, ದೇವಸ್ಥಾನಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿಯೂ ಶೋಧ ನಡೆಸಿದರು.

19ನೇ ವಯಸ್ಸಿಗೆ ಐಎಸ್‌ ಘಟಕ: ಎನ್‌ಐಎ ವಶಕ್ಕೆ ಪಡೆದಿರುವ ಮಿನಾಜ್ ಸಹಚರರಲ್ಲಿ ಒಬ್ಬನಾದ ಸೈಯದ್ ಸಮೀರ್‌, ‘ತನ್ನ ಧರ್ಮದ ಗುರುಗಳಿಗೆ ಅವಮಾನವಾಗಿದೆ’ ಎಂದು ಆರೋಪಿಸಿ ಯುವಕರ ತಂಡ ಕಟ್ಟಿಕೊಂಡು ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಿದ್ದ. ಈತನಿಗೆ ಐಎಸ್‌ ನಂಟು ಬೆಳೆದಿತ್ತು. ಸಾಮಾಜಿಕ ಮಾಧ್ಯಮಗಳ ಮೂಲಕ ಐಎಸ್‌ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಈತ, ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ತಂಡ ಕಟ್ಟಲು ಸಜ್ಜಾಗಿದ್ದ’ ಎಂದು ತಿಳಿಸಿವೆ.

‘ಶಂಕಿತ ಮಿನಾಜ್, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತ. ಈತ ಸಹ ಧರ್ಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದ. ಈತ ಹಾಗೂ ಇತರರನ್ನು ಸೇರಿಸಿಕೊಂಡು ಐಎಸ್‌ ಬಳ್ಳಾರಿ ಘಟಕವನ್ನು ಸಮೀರ್ ಸ್ಥಾಪಿಸಿದ್ದ. ಈ ಘಟಕಕ್ಕೆ ಮಿನಾಜ್‌ನನ್ನೇ ಮುಖ್ಯಸ್ಥನನ್ನಾಗಿ ಮಾಡಿದ್ದ. ಮುಸ್ಲಿಂ ಯುವಕರನ್ನು ಪ್ರಚೋದಿಸಿ ಘಟಕಕ್ಕೆ ಸೇರಿಸಿಕೊಳ್ಳುವ ಜವಾಬ್ದಾರಿಯನ್ನು 19 ವರ್ಷ ವಯಸ್ಸಿನ ಸಮೀರ್ ವಹಿಸಿಕೊಂಡಿದ್ದ’ ಎಂದು ಮೂಲಗಳು ಹೇಳಿವೆ.

ಲ್ಯಾಪ್‌ಟಾಪ್‌ನಲ್ಲಿ ಸಾಕಷ್ಟು ಸುಳಿವು: ‘ಸಮೀರ್ ತಂದೆ ತರಕಾರಿ ವ್ಯಾಪಾರಿ. ತಾಯಿ ಮನೆ ಕೆಲಸ ಮಾಡುತ್ತಿದ್ದಾರೆ. ದುಬಾರಿ ಬೆಲೆಯ ಲ್ಯಾಪ್‌ಟಾಪ್‌ ಹೊಂದಿದ್ದ ಸಮೀರ್, ಭಯೋತ್ಪಾದನಾ ಕೃತ್ಯ ಸಂಚಿಗೆ ಅದನ್ನು ಬಳಸುತ್ತಿದ್ದ. 2023ರ ಡಿ. 18ರಂದು ಮನೆ ಮೇಲೆ ದಾಳಿ ಮಾಡಿದ್ದ ಎನ್‌ಐಎ, ಲ್ಯಾಪ್‌ಟಾಪ್‌ ಜಪ್ತಿ ಮಾಡಿತ್ತು. ಇದೇ ಲ್ಯಾಪ್‌ಟಾಪ್‌ನಲ್ಲಿ ಸಾಕಷ್ಟು ಸುಳಿವು ಲಭ್ಯವಾಗಿವೆ’ ಎಂದು ಮೂಲಗಳು ತಿಳಿಸಿವೆ.

‘ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಸಮೀರ್, ರಾಜ್ಯ ಹಾಗೂ ಹೊರ ರಾಜ್ಯಗಳ ಮುಸ್ಲಿಂ ಯುವಕರನ್ನು ಮೊಬೈಲ್ ಆ್ಯಪ್ ಮತ್ತು ಇತರೆ ಆನ್‌ಲೈನ್ ವ್ಯವಸ್ಥೆ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದ. ‘ಮುಸ್ಲಿಂ ಧರ್ಮದ ಮೇಲೆ ದೌರ್ಜನ್ಯವಾಗುತ್ತಿದೆ. ಅದನ್ನು ತಡೆಯಲು ಪ್ರಾಣ ನೀಡಬೇಕು’ ಎಂಬುದಾಗಿ ಹೇಳಿ ಯುವಕರನ್ನು ಪ್ರಚೋದಿಸುತ್ತಿದ್ದ. ಪ್ರಚೋದನಕಾರಿ ಅಂಶಗಳಿರುವ ಪುಸ್ತಕಗಳು, ವಿಡಿಯೊಗಳು ಹಾಗೂ ಕರಪತ್ರಗಳನ್ನು ಕಳುಹಿಸುತ್ತಿದ್ದ. ಇದರಿಂದ ಪ್ರಚೋದನೆಗೊಂಡ ಯುವಕರು, ಬಳ್ಳಾರಿ ಘಟಕ ಸೇರುತ್ತಿದ್ದರು. ಅಂಥ ಯುವಕರಿಗೆ, ಸಮೀರ್ ಹಾಗೂ ಇತರರು ಕಚ್ಚಾ ಬಾಂಬ್ (ಐಇಡಿ) ತಯಾರಿ ಬಗ್ಗೆ ತರಬೇತಿ ಸಹ ಕೊಡಿಸುತ್ತಿದ್ದರು’ ಎಂದು ತನಿಖಾ ಸಂಸ್ಥೆ ಮೂಲಗಳು ವಿವರಿಸಿವೆ.

‘ಶಂಕಿತರಾದ ಅನಾಸ್ ಇಕ್ಬಾಲ್ ಶೇಖ್ ಹಾಗೂ ದೆಹಲಿಯ ಶಯಾನ್ ರಹಮಾನ್ ಸಹ ಬಳ್ಳಾರಿ ಘಟಕದ ಸದಸ್ಯರು. ಇವರೂ ಬಾಂಬ್ ತಯಾರಿ ತರಬೇತಿ ಪಡೆದಿರುವ ಮಾಹಿತಿ ಇದೆ. ತಮ್ಮೂರಿನ ಯುವಕರನ್ನು ಪ್ರಚೋದಿಸಿ ಘಟಕಕ್ಕೆ ಸೇರಿಸುತ್ತಿದ್ದರು. ಬಾಂಬ್ ಸ್ಫೋಟಿಸುವುದು ಇವರೆಲ್ಲರ ಉದ್ದೇಶವಾಗಿತ್ತೆಂಬ ಸಂಗತಿ ಗೊತ್ತಾಗಿದೆ’ ಎಂದು ಹೇಳಿವೆ.

ದೇಶದ ಹಲವೆಡೆ ಶಂಕಿತರ ವಾಸ: ‘ಬಳ್ಳಾರಿ ಘಟಕದಿಂದ ಬಾಂಬ್ ತಯಾರಿ ಬಗ್ಗೆ ತರಬೇತಿ ಪಡೆದಿರುವ ಹಾಗೂ ಶಂಕಿತ ಉಗ್ರರಿಂದ ಪ್ರಚೋದನೆಗೊಂಡಿರುವ ಹಲವು ಯುವಕರು, ದೇಶದ ಹಲವೆಡೆ ವಾಸವಿರುವ ಮಾಹಿತಿ ಇದೆ. ಅವರೆಲ್ಲರನ್ನೂ ಪತ್ತೆ ಮಾಡಲು ಎನ್‌ಐಎ ತನಿಖೆ ಮುಂದುವರಿಸಿದೆ’ ಎಂದು ಹೇಳಿವೆ.

ಬಳ್ಳಾರಿಯಲ್ಲಿ ಕಚ್ಚಾ ಸಾಮಗ್ರಿ ಖರೀದಿ: ‘ಶಂಕಿತರು ಬಾಂಬ್‌ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು 2023ರಲ್ಲಿಯೇ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸಾಮಗ್ರಿ ಖರೀದಿಸಿದ್ದ ಮಳಿಗೆಗಳಿಂದಲೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಸೈಯದ್ ಸಮೀರ್
ಸೈಯದ್ ಸಮೀರ್
19 ವಯಸ್ಸಿಗೆ ಐಎಸ್‌ ಘಟಕ ಕಟ್ಟಿದ್ದ ಸಮೀರ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ಆರೋಪ ಬಳ್ಳಾರಿಯಲ್ಲಿ ಕಚ್ಚಾ ಸಾಮಗ್ರಿ ಖರೀದಿ
ಐಎಸ್‌ ‘ಬಳ್ಳಾರಿ ಘಟಕ’ದ ಕೃತ್ಯ
‘ಬಾಂಬ್ ಸ್ಫೋಟದ ಬಗ್ಗೆ ಕೆಲ ಸುಳಿವು ಲಭ್ಯವಾಗಿದ್ದರಿಂದ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮಿನಾಜ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಮಿನಾಜ್‌ನ ಸಹಚರರಾದ ಬಳ್ಳಾರಿಯ ಸೈಯದ್ ಸಮೀರ್ (19) ಮುಂಬೈನ ಅನಾಸ್ ಇಕ್ಬಾಲ್ ಶೇಖ್ (23) ಹಾಗೂ ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೈನ್‌ನನ್ನು (26) ನ್ಯಾಯಾಲಯದ ಆದೇಶದಂತೆ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ. ಇವರೆಲ್ಲರೂ ಸೇರಿ ಕಟ್ಟಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್‌) ಬಳ್ಳಾರಿ ಘಟಕದಿಂದಲೇ ಬಾಂಬ್ ಸ್ಫೋಟ ಕೃತ್ಯ ಎಸಗಿರುವ ಬಗ್ಗೆ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸುತ್ತಿವೆ’ ಎಂದು ತನಿಖಾ ಸಂಸ್ಥೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ‘ವಶಕ್ಕೆ ಪಡೆದಿರುವ ಶಂಕಿತರನ್ನು ಬಳ್ಳಾರಿಗೆ ಕರೆದೊಯ್ದಿರುವ ಎನ್‌ಐಎ ವಿಶೇಷ ತಂಡ ಬಾಂಬ್ ಇಟ್ಟವನ ಪತ್ತೆಗಾಗಿ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ. ಮಿನಾಜ್‌ ಹಾಗೂ ಸೈಯದ್ ಸಮೀರ್ ಓಡಾಡಿದ್ದ ಬಳ್ಳಾರಿಯ ಎಲ್ಲ ಸ್ಥಳಗಳು ಹಾಗೂ ಮಳಿಗೆಗಳಲ್ಲಿ ಮಾಹಿತಿ ಕಲೆಹಾಕುತ್ತಿದೆ. ಜೊತೆಗೆ ಬಸ್ ನಿಲ್ದಾಣ ಹಾಗೂ ಇತರೆಡೆ ಇರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT