<p><strong>ಬೆಂಗಳೂರು</strong>: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕೃತವಾಗಿ ವಹಿಸಿಕೊಂಡಿದ್ದು, ಎನ್ಐಎ ಐಜಿಪಿ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆ ಶುರುಮಾಡಿವೆ.</p>.<p>ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟದ ಸ್ಥಳಕ್ಕೆ ಎನ್ಐಎ ಸೇರಿ ಕೇಂದ್ರದ ಹಲವು ತನಿಖಾ ಸಂಸ್ಥೆಗಳು ಭೇಟಿ ನೀಡಿದ್ದವು. ಅವಶೇಷಗಳ ಮಾದರಿಗಳನ್ನು ಸಂಗ್ರಹಿಸಿದ್ದವು. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಎಚ್ಎಎಲ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.</p>.<p>ಕಾನೂನು ಪ್ರಕಾರ ಯುಎಪಿಎ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಅಧಿಕೃತವಾಗಿ ತನಿಖೆ ಆರಂಭಿಸಲು ಎನ್ಐಎ ಅಧಿಕಾರಿಗಳಿಗೆ ನಿರ್ದೇಶನ ದೊರಕಿದೆ. ಹೀಗಾಗಿ, ಐಜಿಪಿ ಸಂತೋಷ್ ರಸ್ತೋಗಿ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.</p>.<p>ರಾಜ್ಯದ ಡಿಜಿ– ಐಜಿಪಿ ಭೇಟಿ: ಪ್ರಕರಣದ ತನಿಖೆ ಆರಂಭಿಸಿರುವ ಎನ್ಐಎ ಐಜಿಪಿ ಸಂತೋಷ್ ರಸ್ತೋಗಿ ಹಾಗೂ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಅವರನ್ನು ಸೋಮವಾರ ಭೇಟಿಯಾಗಿ ಮಾಹಿತಿ ಪಡೆದರು.</p>.<p>ಸ್ಫೋಟ ಪ್ರಕರಣದ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದು, ಅದರ ಪ್ರಗತಿ ಬಗ್ಗೆ ಐಜಿಪಿ ಮಾಹಿತಿ ಪಡೆದುಕೊಂಡರು. ಜೊತೆಗೆ, ಪ್ರಕರಣದ ಕಡತಗಳನ್ನು ಸೂಕ್ತ ಸಮಯಕ್ಕೆ ಹಸ್ತಾಂತರಿಸುವಂತೆ ಕೋರಿದರೆಂದು ಗೊತ್ತಾಗಿದೆ.</p>.<p>ಎನ್ಐಎ ಐಜಿಪಿ ಭೇಟಿ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಲೋಕ್ ಮೋಹನ್, ‘ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎಗೆ ವಹಿಸುವ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ, ಎನ್ಐಎ ಐಜಿಪಿ ಕಚೇರಿಗೆ ಬಂದು ಮಾತುಕತೆ ನಡೆಸಿದರು’ ಎಂದರು.</p>.<p>‘ಇದೊಂದು ಸೂಕ್ಷ್ಮ ಪ್ರಕರಣ. ತನಿಖೆ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>ಸಿಸಿಬಿ, ರಾ, ಐಬಿ ಸಹಕಾರ: ಬಾಂಬ್ ಸ್ಫೋಟ ನಡೆದಿದ್ದ ದಿನದಿಂದಲೂ ಎಲ್ಲ ತನಿಖಾ ಸಂಸ್ಥೆಗಳು ಜಂಟಿಯಾಗಿ ತನಿಖೆ ಕೈಗೊಂಡಿವೆ. ಬೆಂಗಳೂರು ಸಿಸಿಬಿ ಪೊಲೀಸರು ಅಧಿಕೃತವಾಗಿ ತನಿಖೆ ನಡೆಸುತ್ತಿದ್ದರು. ಯುಎಪಿಎ ಕಾಯ್ದೆ ಪ್ರಕರಣವಾಗಿದ್ದರಿಂದ ಎನ್ಐಎ, ರಾ, ಕೇಂದ್ರ ಗುಪ್ತಚರ (ಐಬಿ) ಹಾಗೂ ಎನ್ಎಸ್ಜಿ ಕಮಾಂಡೊಗಳು ಮಾಹಿತಿ ಕಲೆಹಾಕುತ್ತಿದ್ದರು.</p>.<p>‘ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕೃತವಾಗಿ ವಹಿಸಿಕೊಂಡಿದೆ. ಸಿಸಿಬಿ, ರಾ, ಎನ್ಎಸ್ಜಿ ಕಮಾಂಡೊಗಳು ಹಾಗೂ ಹೊರ ರಾಜ್ಯಗಳ ಪೊಲೀಸರು ತನಿಖೆಗೆ ಸಹಕಾರ ನೀಡಲಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಂಡು, ಸ್ಫೋಟದ ಆರೋಪಿಯನ್ನು ಪತ್ತೆ ಮಾಡಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<h2><strong>‘ಪುರಾವೆಗಳು ಲಭ್ಯ’</strong></h2><p>‘ಬಾಂಬ್ ಸ್ಫೋಟ ಪ್ರಕರಣ ಭೇದಿಸಿ ಆರೋಪಿ ಯನ್ನು ಬಂಧಿಸಲು ಬೆಂಗಳೂರು ಪೊಲೀಸರು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳು ಈಗಾಗಲೇ ಲಭ್ಯವಾಗಿವೆ’ ಎಂದು ಡಿಜಿ–ಐಜಿಪಿ ಅಲೋಕ್ ಮೋಹನ್ ಹೇಳಿದರು.</p>.<h2><strong>‘ಹೊರ ಜಿಲ್ಲೆ, ರಾಜ್ಯಗಳಿಗೆ ತಂಡ’</strong></h2><p>ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆ ಮಾಡಲು ಕಾರ್ಯಾಚರಣೆ ನಡೆಸುತ್ತಿರುವ ತನಿಖಾ ತಂಡಗಳು, ಹೊರ ಜಿಲ್ಲೆ ರಾಜ್ಯಗಳಲ್ಲಿ ಶೋಧ ಆರಂಭಿಸಿವೆ.</p><p>‘ಸ್ಫೋಟದ ನಂತರ ಪರಾರಿಯಾಗಿರುವ ಆರೋಪಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಹೋಗಿರುವ ಮಾಹಿತಿ ಇದೆ. ಅಲ್ಲೆಲ್ಲ ಶೋಧ ನಡೆಯುತ್ತಿದೆ. ಆರೋಪಿ ಎಲ್ಲಿದ್ದಾನೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕೃತವಾಗಿ ವಹಿಸಿಕೊಂಡಿದ್ದು, ಎನ್ಐಎ ಐಜಿಪಿ ನೇತೃತ್ವದಲ್ಲಿ ವಿಶೇಷ ತಂಡಗಳು ಕಾರ್ಯಾಚರಣೆ ಶುರುಮಾಡಿವೆ.</p>.<p>ಮಾರ್ಚ್ 1ರಂದು ನಡೆದಿದ್ದ ಬಾಂಬ್ ಸ್ಫೋಟದ ಸ್ಥಳಕ್ಕೆ ಎನ್ಐಎ ಸೇರಿ ಕೇಂದ್ರದ ಹಲವು ತನಿಖಾ ಸಂಸ್ಥೆಗಳು ಭೇಟಿ ನೀಡಿದ್ದವು. ಅವಶೇಷಗಳ ಮಾದರಿಗಳನ್ನು ಸಂಗ್ರಹಿಸಿದ್ದವು. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಎಚ್ಎಎಲ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.</p>.<p>ಕಾನೂನು ಪ್ರಕಾರ ಯುಎಪಿಎ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿತ್ತು. ಇದರ ಬೆನ್ನಲ್ಲೇ ಅಧಿಕೃತವಾಗಿ ತನಿಖೆ ಆರಂಭಿಸಲು ಎನ್ಐಎ ಅಧಿಕಾರಿಗಳಿಗೆ ನಿರ್ದೇಶನ ದೊರಕಿದೆ. ಹೀಗಾಗಿ, ಐಜಿಪಿ ಸಂತೋಷ್ ರಸ್ತೋಗಿ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ.</p>.<p>ರಾಜ್ಯದ ಡಿಜಿ– ಐಜಿಪಿ ಭೇಟಿ: ಪ್ರಕರಣದ ತನಿಖೆ ಆರಂಭಿಸಿರುವ ಎನ್ಐಎ ಐಜಿಪಿ ಸಂತೋಷ್ ರಸ್ತೋಗಿ ಹಾಗೂ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಅವರನ್ನು ಸೋಮವಾರ ಭೇಟಿಯಾಗಿ ಮಾಹಿತಿ ಪಡೆದರು.</p>.<p>ಸ್ಫೋಟ ಪ್ರಕರಣದ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದು, ಅದರ ಪ್ರಗತಿ ಬಗ್ಗೆ ಐಜಿಪಿ ಮಾಹಿತಿ ಪಡೆದುಕೊಂಡರು. ಜೊತೆಗೆ, ಪ್ರಕರಣದ ಕಡತಗಳನ್ನು ಸೂಕ್ತ ಸಮಯಕ್ಕೆ ಹಸ್ತಾಂತರಿಸುವಂತೆ ಕೋರಿದರೆಂದು ಗೊತ್ತಾಗಿದೆ.</p>.<p>ಎನ್ಐಎ ಐಜಿಪಿ ಭೇಟಿ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಲೋಕ್ ಮೋಹನ್, ‘ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎಗೆ ವಹಿಸುವ ಕಾನೂನು ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ, ಎನ್ಐಎ ಐಜಿಪಿ ಕಚೇರಿಗೆ ಬಂದು ಮಾತುಕತೆ ನಡೆಸಿದರು’ ಎಂದರು.</p>.<p>‘ಇದೊಂದು ಸೂಕ್ಷ್ಮ ಪ್ರಕರಣ. ತನಿಖೆ ಅಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.</p>.<p>ಸಿಸಿಬಿ, ರಾ, ಐಬಿ ಸಹಕಾರ: ಬಾಂಬ್ ಸ್ಫೋಟ ನಡೆದಿದ್ದ ದಿನದಿಂದಲೂ ಎಲ್ಲ ತನಿಖಾ ಸಂಸ್ಥೆಗಳು ಜಂಟಿಯಾಗಿ ತನಿಖೆ ಕೈಗೊಂಡಿವೆ. ಬೆಂಗಳೂರು ಸಿಸಿಬಿ ಪೊಲೀಸರು ಅಧಿಕೃತವಾಗಿ ತನಿಖೆ ನಡೆಸುತ್ತಿದ್ದರು. ಯುಎಪಿಎ ಕಾಯ್ದೆ ಪ್ರಕರಣವಾಗಿದ್ದರಿಂದ ಎನ್ಐಎ, ರಾ, ಕೇಂದ್ರ ಗುಪ್ತಚರ (ಐಬಿ) ಹಾಗೂ ಎನ್ಎಸ್ಜಿ ಕಮಾಂಡೊಗಳು ಮಾಹಿತಿ ಕಲೆಹಾಕುತ್ತಿದ್ದರು.</p>.<p>‘ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕೃತವಾಗಿ ವಹಿಸಿಕೊಂಡಿದೆ. ಸಿಸಿಬಿ, ರಾ, ಎನ್ಎಸ್ಜಿ ಕಮಾಂಡೊಗಳು ಹಾಗೂ ಹೊರ ರಾಜ್ಯಗಳ ಪೊಲೀಸರು ತನಿಖೆಗೆ ಸಹಕಾರ ನೀಡಲಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಂಡು, ಸ್ಫೋಟದ ಆರೋಪಿಯನ್ನು ಪತ್ತೆ ಮಾಡಬೇಕಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.</p>.<h2><strong>‘ಪುರಾವೆಗಳು ಲಭ್ಯ’</strong></h2><p>‘ಬಾಂಬ್ ಸ್ಫೋಟ ಪ್ರಕರಣ ಭೇದಿಸಿ ಆರೋಪಿ ಯನ್ನು ಬಂಧಿಸಲು ಬೆಂಗಳೂರು ಪೊಲೀಸರು ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳು ಈಗಾಗಲೇ ಲಭ್ಯವಾಗಿವೆ’ ಎಂದು ಡಿಜಿ–ಐಜಿಪಿ ಅಲೋಕ್ ಮೋಹನ್ ಹೇಳಿದರು.</p>.<h2><strong>‘ಹೊರ ಜಿಲ್ಲೆ, ರಾಜ್ಯಗಳಿಗೆ ತಂಡ’</strong></h2><p>ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಪತ್ತೆ ಮಾಡಲು ಕಾರ್ಯಾಚರಣೆ ನಡೆಸುತ್ತಿರುವ ತನಿಖಾ ತಂಡಗಳು, ಹೊರ ಜಿಲ್ಲೆ ರಾಜ್ಯಗಳಲ್ಲಿ ಶೋಧ ಆರಂಭಿಸಿವೆ.</p><p>‘ಸ್ಫೋಟದ ನಂತರ ಪರಾರಿಯಾಗಿರುವ ಆರೋಪಿ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಹೋಗಿರುವ ಮಾಹಿತಿ ಇದೆ. ಅಲ್ಲೆಲ್ಲ ಶೋಧ ನಡೆಯುತ್ತಿದೆ. ಆರೋಪಿ ಎಲ್ಲಿದ್ದಾನೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>