ಬೆಂಗಳೂರು: ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ನಗರದಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಿದರು.
ಒಂದು ತಿಂಗಳ ಉಪವಾಸ ಆಚರಿಸಿದ್ದ ಮುಸ್ಲಿಮರು, ಚಂದ್ರದರ್ಶನದ ಬಳಿಕ ಆಹಾರ ಸ್ವೀಕರಿಸಿ ವ್ರತ ಅಂತ್ಯಗೊಳಿಸಿದರು. ಸಮುದಾಯದವರು ಮುಂಜಾನೆಯೇ ಹೊಸಬಟ್ಟೆಗಳನ್ನು ಧರಿಸಿ, ಪ್ರಾರ್ಥನೆಗಾಗಿ ಪ್ರಾರ್ಥನಾ ಮಂದಿರಗಳತ್ತ ತೆರಳಿದರು. ಮಾರುಕಟ್ಟೆ ಪ್ರದೇಶ, ಕೆಲವು ಮುಖ್ಯ ರಸ್ತೆಗಳಲ್ಲೇ ಸಾಮೂಹಿಕ ಪ್ರಾರ್ಥನೆಗಳು ನಡೆದವು.
ಚಾಮರಾಜಪೇಟೆ, ಮೈಸೂರು ರಸ್ತೆ, ದಂಡು ರೈಲು ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ ಮಸೀದಿಯಲ್ಲಿ ಸಾವಿರಾರು ಮಂದಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಬಳಿಕ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ಕೋರಿದರು. ಬಡವರಿಗೆ ಹಣ್ಣುಹಂಪಲು, ಧಾನ್ಯ ದಾನ ನೀಡಲಾಯಿತು.
‘ಎಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ನಾವು ಉಪವಾಸ ಮಾಡಿ ದಾನ ಧರ್ಮದ ಮೂಲಕ ಜಗತ್ತಿನ ಹಸಿವನ್ನು ನೀಗಿಸುವ ಕೆಲಸ ಮಾಡುತ್ತೇವೆ’ ಎಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜಹೀರ್ ಅನ್ಸರ್ ಎಂಬುವವರು ಹೇಳಿದರು.