ಬೆಂಗಳೂರು: ‘ಫ್ಲೆಕ್ಸ್, ಹೋರ್ಡಿಂಗ್, ಬ್ಯಾನರ್ ಮುಂತಾದ ಪ್ರಚಾರ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದಕ್ಕೆ ನಿಷೇಧ ವಿಧಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಿ' ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ನಿರ್ದೇಶಿಸಿದೆ.
ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ, ಮಾಯಿಗೇಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
‘ಫ್ಲೆಕ್ಸ್ ಹಾವಳಿ ಮರುಕಳಿಸಿದೆ ಎಂಬ ಅರ್ಜಿದಾರರ ಆರೋಪಕ್ಕೆ ಬಿಬಿಎಂಪಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸಾರ್ವಜನಿಕ ಹಿತದೃಷ್ಟಿಯಿಂದ ಕೋರ್ಟ್ ಈ ಬಗ್ಗೆ ವಿಶೇಷ ಗಮನಹರಿಸಲಿದೆ. ಹಾಗಾಗಿ, ಈ ಪ್ರಕರಣದಲ್ಲಿ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರನ್ನು ಅಮಿಕಸ್ ಕ್ಯೂರಿ (ಕೋರ್ಟ್ಗೆ ಸಹಕರಿಸುವ ವಕೀಲ) ಆಗಿ ನೇಮಕ ಮಾಡಲಾಗುವುದು’ ಎಂದು ನ್ಯಾಯಪೀಠ ಆದೇಶಿಸಿತು.
ಅರ್ಜಿದಾರರ ಆಕ್ಷೇಪಣೆಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಲು ಬಿಬಿಎಂಪಿಗೆ ಎಂದು ಸೂಚಿಸಿ ವಿಚಾರಣೆಯನ್ನು ಎರಡುವಾರಗಳ ಕಾಲ ಮುಂದೂಡಿದೆ.