ಬೆಂಗಳೂರು: ಡಾ. ರಾಮ ನಾಗಪ್ಪ ಶೆಟ್ಟಿ ಎಂಬ ಹೆಸರು ಅಪರಿಚಿತ. ಆದರೆ, ಆರ್.ಎನ್. ಶೆಟ್ಟಿ ಎಂಬ ಹೆಸರು ತಿಳಿಯದವರಿಲ್ಲ. ಸದಾ ಕ್ರಿಯಾಶೀಲರಾಗಿದ್ದು, ಸ್ಪೂರ್ತಿಯ ಸೆಲೆಯಾಗಿ ತುಂಬು ಜೀವನ ನಡೆಸಿದ್ದ ಅವರದ್ದು ಪರಿಪೂರ್ಣ ಬದುಕು. ಇಂದು ಭೌತಿಕವಾಗಿ ಇಲ್ಲದೇ ಇದ್ದರೂ ಅವರ ಜೀವನ ಪ್ರೀತಿ, ಕಾರ್ಯಶ್ರದ್ಧೆ ಮಾಡಿದ ಕೆಲಸಗಳು ಅನುಕರಣೀಯ.
ಸಾಮಾನ್ಯ ಮಧ್ಯಮ ವರ್ಗದಿಂದ ಬಂದು, ಸಾವಿರಾರು ಜನರ ಬದುಕಿಗೆ ದಾರಿದೀಪವಾಗಿರುವ ಆರ್ಎನ್ಎಸ್ ಸಮೂಹ ಸಂಸ್ಥೆಯನ್ನು ಕಟ್ಟಿದವರು ಶೆಟ್ಟರು.
ಸಿವಿಲ್ ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದ ಅವರು, ಹಿಡಕಲ್, ತಟ್ಟೀಹಳ್ಳ, ಸೂಪಾ, ಗೇರುಸೊಪ್ಪೆ ಅಣೆಕಟ್ಟು ನಿರ್ಮಾಣಗಳ ಜತೆಗೆ ವಾರಾಹಿ ಜಲವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ ಸುರಂಗ ಮಾರ್ಗಗಳು ಹೀಗೆ ವಿವಿಧ ಯೋಜನೆಗಳ ನಿರ್ಮಾಣದಲ್ಲಿ ತಮ್ಮ ಛಾಪು ಮೂಡಿಸಿದ್ದರು.
ಹೋಟೆಲ್ ಉದ್ಯಮದತ್ತಲೂ ತಮ್ಮನ್ನು ತೊಡಗಿಸಿಕೊಂಡ ಅವರು, ತಾಜ್ ಸಮೂಹಗಳಲ್ಲಿ ಸಹಭಾಗಿಯಾದರು. ತಮ್ಮ ಹುಟ್ಟೂರು ಮುರುಡೇಶ್ವರದಲ್ಲಿ 150 ಹಾಸಿಗೆಗಳ ಆರ್ಎನ್ಎಸ್ ಆಸ್ಪತ್ರೆ, ಗ್ರಾಮೀಣ ಭಾಗದಲ್ಲಿ ಅಗತ್ಯವಿರುವಂಥ ಪಾಲಿಟೆಕ್ನಿಕ್ ಕಾಲೇಜು, ತೆರೆದು ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.
ಆರ್.ಎನ್. ಶೆಟ್ಟಿ ಧರ್ಮಾರ್ಥ ಸಂಸ್ಥೆಯ ಆಶ್ರಯದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಕಲ್ಯಾಣ ಮಂಟಪ ಗಳು, ಅನಾಥಾಶ್ರಮಗಳ ನಿರ್ಮಾಣ, ಕುಡಿಯುವ ನೀರು ಸೌಲಭ್ಯ, ನಿರ್ಗತಿಕ ರಿಗೆ ವಸತಿ, ಉಚಿತ ವೈದ್ಯಕೀಯ ಸೌಲಭ್ಯ, ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.