ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸ್ತೆ ಅಪಘಾತ: ಜೀವಹಾನಿ ತಡೆಗೆ ಕ್ಷಿಪ್ರ ಚಿಕಿತ್ಸೆ!

ಹೆದ್ದಾರಿಗಳ ಅಕ್ಕಪಕ್ಕ ಟ್ರಾಮಾ ಸೆಂಟರ್ ಬಲವರ್ಧನೆಗೆ ಆರೋಗ್ಯ ಇಲಾಖೆ ಕ್ರಮ
Published 24 ಮೇ 2024, 0:56 IST
Last Updated 24 ಮೇ 2024, 0:56 IST
ಅಕ್ಷರ ಗಾತ್ರ

ಬೆಂಗಳೂರು: ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಜೀವ ಹಾನಿ ತಪ್ಪಿಸಲು ಟ್ರಾಮಾ ಸೆಂಟರ್‌ಗಳ ಬಲವರ್ಧನೆಗೆ ಮುಂದಾಗಿರುವ ಆರೋಗ್ಯ ಇಲಾಖೆ, ಅಧಿಕ ಅಪಘಾತಗಳು ಸಂಭವಿಸುವ ‘ಹಾಟ್‌ಸ್ಪಾಟ್‌’ಗಳಲ್ಲಿ ಕ್ಷಿಪ್ರ ಚಿಕಿತ್ಸೆ ಒದಗಿಸಲು ಸಿಬ್ಬಂದಿಗೆ ತರಬೇತಿ ಒದಗಿಸುತ್ತಿದೆ.

ರಸ್ತೆ ಅಪಘಾತ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ರಾಜ್ಯ ಅಪರಾಧ ದಾಖಲೆ ಬ್ಯೂರೊ ಮಾಹಿತಿ ಪ್ರಕಾರ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಸ್ತೆ ಅಪಘಾತದಿಂದ ವಾರ್ಷಿಕ ಸರಾಸರಿ 13 ಸಾವಿರ ಮಂದಿ ಸಾಯುತ್ತಾರೆ. 4 ಲಕ್ಷ ಗಂಭೀರ ಗಾಯ ಪ್ರಕರಣಗಳು ದಾಖಲಾಗುತ್ತಿವೆ. ರಸ್ತೆ ಅಪಘಾತ ಪ್ರಕರಣಗಳಲ್ಲಿ ವ್ಯಕ್ತಿಗೆ ತುರ್ತು ಚಿಕಿತ್ಸೆ ಅಗತ್ಯ. ಈ ಸಂಬಂಧ ಇಲಾಖೆಯು ‘ರಾಸ್ತಾ’ ಕಾರ್ಯಕ್ರಮದಡಿ ಅಧಿಕ ಅಪಘಾತ ಪ್ರಕರಣಗಳು ವರದಿಯಾಗುವ ಸ್ಥಳಗಳಲ್ಲಿ (ಹಾಟ್‌ಸ್ಪಾಟ್‌) ಚಿಕಿತ್ಸೆಗೆ ಸಂಬಂಧಿಸಿದಂತೆ ಪೊಲೀಸರು, ಆಂಬುಲೆನ್ಸ್ ಚಾಲಕರು ಹಾಗೂ ಸಾರ್ವಜನಿಕರಿಗೆ ತರಬೇತಿ ನೀಡುತ್ತಿದೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಜೀವರಕ್ಷಾ ಟ್ರಸ್ಟ್ ಸಹಯೋಗದಲ್ಲಿ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಹಾಟ್‌ಸ್ಪಾಟ್‌ನಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ 160 ಮಂದಿಗೆ ಕೌಶಲ ವೃದ್ಧಿಸಲಾಗುತ್ತಿದೆ. ತರಬೇತಿ ಹೊಂದಿದವರು ತುರ್ತು ಚಿಕಿತ್ಸೆ ಒದಗಿಸಿ, ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದಾರೆ. 

‘ಹಾಟ್‌ಸ್ಪಾಟ್‌’ ಗುರುತು: ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ಹೆದ್ದಾರಿಗಳಲ್ಲಿ ನಡೆಯುತ್ತಿರುವ ಅಪಘಾತಗಳ ಆಧಾರದಲ್ಲಿ ‘ಹಾಟ್‌ಸ್ಪಾಟ್‌’ ಗುರುತಿಸಿ, ಇಲಾಖೆಗೆ ವಿವರ ನೀಡಿದೆ. 3 ವರ್ಷಗಳಲ್ಲಿ ಒಂದೇ ಸ್ಥಳದಲ್ಲಿ 5 ಅಪಘಾತ ಸಂಭವಿಸಿ, 10 ಮಂದಿ ಮೃತಪಟ್ಟ ಸ್ಥಳಗಳನ್ನು ಪಟ್ಟಿ ಮಾಡಿದೆ. ಇಂತಹ ಸ್ಥಳಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

‘ರಸ್ತೆ ಅಪಘಾತದಿಂದ ಸಂಭವಿಸುತ್ತಿರುವ ಗಾಯಗಳು ಮಿದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಹೆಚ್ಚಿನ ಗಾಯಗಳು ಮಿದುಳಿನ ಊತಕ್ಕೆ ಕಾರಣವಾಗುತ್ತವೆ. ರಕ್ತಸ್ರಾವದಿಂದ ಮೃತಪಡುವ ಅಪಾಯವೂ ಇರುತ್ತದೆ. ಆದ್ದರಿಂದ ಟ್ರಾಮಾ ಸೇವೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಸ್ಥಳದಲ್ಲಿ ತುರ್ತು ಚಿಕಿತ್ಸೆ ಒದಗಿಸುವ ಜತೆಗೆ ಹತ್ತಿರದ ಟ್ರಾಮಾ ಕೇಂದ್ರಕ್ಕೆ ಕರೆದೊಯ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

23 ಟ್ರಾಮಾ ಆಸ್ಪತ್ರೆ ಗುರುತು ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಹೆದ್ದಾರಿಗಳ ಅಕ್ಕಪಕ್ಕದ ರಾಜ್ಯದ 23 ಟ್ರಾಮಾ ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು ಇವುಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದೆ. ಗಾಯಗೊಂಡವರನ್ನು ಆಂಬುಲೆನ್ಸ್ ನೆರವಿನಿಂದ ಅಲ್ಲಿಗೆ ಸ್ಥಳಾಂತರಿಸಿ ಚಿಕಿತ್ಸೆ ಒದಗಿಸಲಾಗುತ್ತದೆ. ₹45 ಕೋಟಿ ವೆಚ್ಚದಲ್ಲಿ 146 ಆರೋಗ್ಯ ಕೇಂದ್ರಗಳ ತುರ್ತು ನಿಗಾ ಘಟಕವನ್ನೂ ಮೇಲ್ದರ್ಜೆಗೇರಿಸಲಾಗುತ್ತಿದೆ. ಚಿಕಿತ್ಸೆಗೆ ಅಗತ್ಯವಿರುವ ಮಾನವಸಂಪನ್ಮೂಲ ವೃದ್ಧಿಗೂ ಇಲಾಖೆ ಕ್ರಮಕೈಗೊಂಡಿದೆ. 

ನಿಯಮ ಉಲ್ಲಂಘನೆ ಕಾರಣ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಪ್ರಕಾರ ವರದಿಯಾಗುತ್ತಿರುವ ತಲೆ ಗಾಯ ಪ್ರಕರಣಗಳಲ್ಲಿ ಶೇ 70ರಷ್ಟು ರಸ್ತೆ ಅಪಘಾತಕ್ಕೆ ಸಂಭವಿಸಿದ್ದಾಗಿವೆ. ಗಾಯಗೊಳ್ಳುವವರಲ್ಲಿ ಹೆಚ್ಚಿನವರು ದ್ವಿಚಕ್ರವಾಹನ ಸವಾರರಾಗಿದ್ದಾರೆ. ಸೀಟ್ ಬೆಲ್ಟ್ ಹಾಕದಿರುವುದು ಅತಿಯಾದ ವೇಗದಲ್ಲಿ ಚಾಲನೆ ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ ಬಳಕೆ ಗುಣಮಟ್ಟದ ಹೆಲ್ಮೆಟ್ ಧರಿಸದೆ ಇರುವುದು ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಹಾಕಿಕೊಳ್ಳದೆ ಇರುವುದು ಸೇರಿ ವಿವಿಧ ಕಾರಣಗಳಿಂದ ರಸ್ತೆ ಅಪಘಾತ ಹಾಗೂ ಮರಣ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದು ಸಂಸ್ಥೆ ವಿಶ್ಲೇಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT