ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾ ವಣೆಯಲ್ಲಿ ಬಹಿರಂಗ ಪ್ರಚಾರಕ್ಕೆ ಭಾನುವಾರ ಅವಕಾಶ ಇತ್ತಾದರೂ, ತನ್ನ ಶಕ್ತಿ ಕೇಂದ್ರಗಳ ಮಟ್ಟದಲ್ಲಿ ಬಿಜೆಪಿ ಕಾರ್ಯಾಚರಣೆ ನಡೆಸಿದೆ. ಮನೆ, ಮನೆ ಪ್ರಚಾರದ ಜತೆಯಲ್ಲೇ ಮತದಾರರಿಗೆ ‘ವೋಟರ್ ಸ್ಲಿಪ್’ ವಿತರಿಸುವ ಕೆಲಸಕ್ಕೆ ಚಾಲನೆ ನೀಡಿದೆ.
ಮತದಾರರ ಪಟ್ಟಿಯಲ್ಲಿ ಹೆಸರಿರುವ ಎಲ್ಲರಿಗೂ ಚುನಾವಣಾ ಆಯೋಗದಿಂದ ‘ವೋಟರ್ ಸ್ಲಿಪ್’ ವಿತರಿಸಲಾಗುತ್ತಿದೆ. ಅದನ್ನು ಮತದಾನದ ವೇಳೆ ಗುರು ತಿನ ಚೀಟಿಯಾಗಿಯೂ ಬಳಸಲು ಅವಕಾಶವಿದೆ. ಅಂತಹ ‘ವೋಟರ್ ಸ್ಲಿಪ್’ಮುದ್ರಿಸಿರುವ ಬಿಜೆಪಿ, ಎಲ್ಲ ಮತದಾರರಿಗೂ ತಲುಪಿಸಲು ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಿದೆ.
ಪ್ರತಿ ಮತಗಟ್ಟೆ ಹಂತದಲ್ಲಿ ಪಕ್ಷದ ಸಮಿತಿಗಳ ಅಧ್ಯಕ್ಷರಿಗೆ ವೋಟರ್ ಸ್ಲಿಪ್ ವಿತರಣೆಯ ಜವಾಬ್ದಾರಿ ನೀಡಲಾಗಿದೆ.
ಮಾತಿನ ಚಕಮಕಿ: ಅಂತಿಮ ಸುತ್ತಿನ ಪ್ರಚಾರ ಆರಂಭವಾಗುತ್ತಿದ್ದಂತೆಯೇ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಹಲವು ಕಡೆಗಳಲ್ಲಿ ಮಾತಿನ ಚಕಮಕಿ ನಡೆದಿದೆ. ಭಾನುವಾರ ‘ವೋಟರ್ ಸ್ಲಿಪ್’ ವಿತರಣೆಗೆ ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಯತ್ನಿಸಿದರು.