ಬೆಂಗಳೂರು: ‘ಎಸ್ಎಟಿಗೆ (ಸ್ಕಲಾಸ್ಟಿಕ್ ಆ್ಯಪ್ಟಿಟ್ಯೂಡ್ ಟೆಸ್ಟ್) ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಬಂದ್ನಿಂದ ಯಾವುದೇ ತೊಂದರೆಯಾಗದಂತೆ ಪೊಲೀಸರು ಸೂಕ್ತ ರಕ್ಷಣೆ ಹಾಗೂ ಬಂದೋಬಸ್ತ್ ಕಲ್ಪಿಸಬೇಕು’ ಎಂದು ಶಾಸಕ ಎಂ.ಬಿ. ಪಾಟೀಲ, ರಾಜ್ಯ ಪೊಲೀಸರನ್ನು ಕೋರಿದ್ದಾರೆ.
ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಈ ಪರೀಕ್ಷೆ ನಡೆಸಲಾಗುತ್ತಿದೆ. ಜಗತ್ತಿನಾದ್ಯಂತ ಈ ಪರೀಕ್ಷೆ ನಡೆಯುವುದರಿಂದ ಬಂದ್ ಕಾರಣದಿಂದ ಮುಂದೂಡುವುದಾಗಲಿ ರದ್ದುಪಡಿಸುವುದಾಗಲಿ ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೊಲೀಸರು ಭದ್ರತೆ ಕಲ್ಪಿಸಬೇಕು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರಿಗೆ ಪಾಟೀಲ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್ ಏಕಮಾತ್ರ ಪರೀಕ್ಷಾ ಕೇಂದ್ರವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಯಿಂದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲು ರಾಜಧಾನಿಗೆ ಬರಲಿದ್ದಾರೆ.