ಕೆ.ಆರ್.ಪುರ: ರಾಮಮೂರ್ತಿನಗರ ವಾರ್ಡ್ನ ಗ್ರೀನ್ ಗಾರ್ಡನ್ ಬಡಾವಣೆಯಿಂದ ಕಲ್ಕೆರೆ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಜನರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ.
ಕಲ್ಕೆರೆ ಖಾನೆ ಮುಖ್ಯ ರಸ್ತೆಯ ಮೂಲಕ ಹಾದು ಹೋಗಿರುವ ಸುಮಾರು ಒಂದು ಕಿ.ಮೀ ಉದ್ದದ ರಾಜಕಾಲುವೆ ಕೆಲವು ಪ್ರಭಾವಿಗಳಿಂದ ಒತ್ತುವರಿಯಾಗಿದೆ. 60 ಅಡಿ ಇದ್ದ ರಾಜಕಾಲುವೆ ಸಣ್ಣ ಮೋರಿಯಂತಾಗಿರುವುದೇ ಕಾಲುವೆಯಲ್ಲಿ ಹರಿಯಬೇಕಿದ್ದ ಕೊಳಚೆ ರಸ್ತೆಗೆ ಬರಲು ಕಾರಣವಾಗಿದೆ.
ಮಳೆ ಬಂದರೆ ಕೊಳಚೆ ನೀರು ಮತ್ತು ಮಳೆ ನೀರು ಮನೆಗಳಿಗೆ ಪ್ರವಾಹದಂತೆ ನುಗ್ಗುತ್ತದೆ. ರಾಜಕಾಲುವೆಯಲ್ಲಿ ಗಿಡಗಂಟಿ ಬೆಳೆದಿವೆ. ಪ್ಲಾಸ್ಟಿಕ್ ಕವರ್, ಥರ್ಮಕೋಲ್ಗಳಿಂದ ಕಾಲುವೆ ತುಂಬಿ ಹೋಗಿದೆ. ಸೊಳ್ಳೆ ಉತ್ಪತ್ತಿಯ ತಾಣವಾಗಿದೆ ಎಂದು ಸ್ಥಳೀಯರು ತಿಳಿಸಿದರು.
ರಸ್ತೆ ದಾಟುವಾಗ ವಾಹನ ಸವಾರರು ಪಲ್ಟಿಯಾಗಿ ಗಾಯಗೊಂಡಿದ್ದಾರೆ. ಈ ದಾರಿಯಲ್ಲಿ ತೆರಳುವ ಜಾನುವಾರುಗಳಿಗೆ ತೊಂದರೆಯಾಗಿದೆ. ರಾಜಕಾಲುವೆ ಒತ್ತುವರಿಯೇ ಇದಕ್ಕೆ ಕಾರಣ. ಆದರೆ, ಒತ್ತುವರಿದಾರರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂದು ಸ್ಥಳೀಯ ಕಿರಣ್ ದೂರಿದರು.
ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆಯಲ್ಲಿ ದ್ವಿಚಕ್ರ ವಾಹನಗಳು ಹಾಗೂ ಲಘು ವಾಹನಗಳು ಸಂಚರಿಸುವುದೇ ಕಷ್ಟ. ಶಾಲಾ ಮಕ್ಕಳು, ಹಿರಿಯರು, ಗರ್ಭಿಣಿಯರು ರಸ್ತೆ ದಾಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ಕಲ್ಕೆರೆ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.
ವಾಹನ ಸವಾರ ರಸ್ತೆ ದಾಟಲು ಹರಸಹಾಸಪಡುತ್ತಿರುವುದು
ಈ ಬಗ್ಗೆ ಬೃಹತ್ ನೀರುಗಾಲುವೆ ಅಧಿಕಾರಿಗಳಾದ ಮಾಲತಿ ಹಾಗೂ ಸತೀಶ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.