ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಚರಂಡಿ, ರಾಜಕಾಲುವೆಗೆ ತ್ಯಾಜ್ಯ ನೀರು: ಜಲಮಂಡಳಿಯಿಂದ ನೋಟಿಸ್‌ ಜಾರಿ

2,137 ಅನಧಿಕೃತ ಸಂಪರ್ಕ ಪತ್ತೆ
Published 11 ಮೇ 2024, 16:02 IST
Last Updated 11 ಮೇ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಒಳಚರಂಡಿ ಮಾರ್ಗ ಹಾಗೂ ಮಳೆನೀರು ಹರಿಯುವ ರಾಜಕಾಲುವೆಗೆ ತ್ಯಾಜ್ಯ ನೀರು ಹರಿಸುತ್ತಿರುವ 2,137 ಅನಧಿಕೃತ ಸಂಪರ್ಕಗಳನ್ನು ಜಲಮಂಡಳಿ ಪತ್ತೆ ಹಚ್ಚಿದೆ. ದಂಡ ವಿಧಿಸಲು ನೋಟಿಸ್‌ ಜಾರಿ ಮಾಡುತ್ತಿದೆ.

ಅನಧಿಕೃತ ಸಂಪರ್ಕಗಳನ್ನು ಸಕ್ರಮಗೊಳಿಸಿಕೊಳ್ಳಲು ಮೇ 10ರವರೆಗೆ ಗಡುವು ನೀಡಲಾಗಿತ್ತು. ಗಡುವು ಮುಗಿದ ಕಾರಣ ಸೋಮವಾರದಿಂದ ಕಠಿಣ ಕ್ರಮ ಕೈಗೊಳ್ಳಲು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್‌ ಮನೋಹರ್‌ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಕೆಲವೆಡೆ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹರಿಸಲಾಗುತ್ತಿದೆ. ಇದರಿಂದ ಹಲವೆಡೆ ರಸ್ತೆಗಳಲ್ಲಿ ತ್ಯಾಜ್ಯ ನೀರು ಹರಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನಧಿಕೃತ ಸಂಪರ್ಕಗಳ ಪರಿಶೀಲನೆ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ನಗರದಲ್ಲಿ 17,793 ಕಡೆಗಳಲ್ಲಿ ಸರ್ವೆ ನಡೆಸಲಾಗಿದೆ. 587 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಂತೆ ಅನಧಿಕೃತವಾಗಿ ಸಂಪರ್ಕ ಪಡೆದಿರುವ 2,137 ಸಂಪರ್ಕ ಗುರುತಿಸಲಾಗಿದೆ. ಇವುಗಳಲ್ಲಿ 260 ಸಂಪರ್ಕಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಿವೆ. 149 ಸಂಪರ್ಕಗಳಿಗೆ ಡಿಮ್ಯಾಂಡ್‌ ನೋಟೀಸ್‌ ಜಾರಿಗೊಳಿಸಿದ್ದು, 60 ಸಂಪರ್ಕಗಳಿಂದ ದಂಡ ವಸೂಲು ಮಾಡಲಾಗಿದೆ. 1,390 ಸಂಪರ್ಕಗಳಿಗೆ ನೋಟೀಸ್‌ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

‘ಅನಧಿಕೃತವಾಗಿ ತ್ಯಾಜ್ಯ ನೀರಿನ ವಿಲೇವಾರಿ ಹಾಗೂ ಮಳೆಗಾಲದಲ್ಲಿ ಅನಧಿಕೃತ ಸಂಪರ್ಕಗಳಿಂದ ಬರುವಂತಹ ತ್ಯಾಜ್ಯ ನೀರಿನಿಂದ ಒಳಚರಂಡಿ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅನಧಿಕೃತ ಸಂಪರ್ಕಗಳ ಸಕ್ರಮಕ್ಕೆ ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಇಲ್ಲದಿದ್ದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT