ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ವಿಡಿಯೊ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯ

ನಂದಿನಿ ಲೇಔಟ್ ಪೊಲೀಸರಿಂದ ಆರೋಪಿ ಬಂಧನ * ವಿವಾದಿತ ಜಾಗದಲ್ಲಿ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ
Last Updated 4 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಾದಿತ ಜಾಗದಲ್ಲಿ ಅನಾವರಣಗೊಳಿಸಲಾದ ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಆ ಸಂಬಂಧ ಮಹೇಶ್‌ ಎಂಬಾತನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಂದಿನಿ ಲೇಔಟ್‌ನ ಕಂಠೀರವ ನಗರದಲ್ಲಿಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಸಂತ್ರಸ್ತೆ ನೀಡಿರುವ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿ ಮಹೇಶ್, ಸ್ಥಳೀಯ ಬಲಮುರಿ ಗಣಪತಿ ದೇವಸ್ಥಾನ ಟ್ರಸ್ಟ್‌ನಲ್ಲಿ ಗುರುತಿಸಿಕೊಂಡಿದ್ದಾನೆ. ಸಂಘಟನೆಯೊಂದರ ಅಧ್ಯಕ್ಷರೂ ಆಗಿದ್ದಾನೆ’ ಎಂದರು.

ಆಗಿದ್ದೇನು? ‘ಕಂಠೀರವ ನಗರದಲ್ಲಿ ವಿವಾದಿತ ಜಾಗವಿದ್ದು, ಅದನ್ನು ಕಬಳಿಸಲು ಕೆಲವರು ಹುನ್ನಾರ ನಡೆಸುತ್ತಿರುವ ಆರೋಪವಿದೆ. ಅದೇ ಕಾರಣಕ್ಕೆ ಸ್ಥಳೀಯ ನಿವಾಸಿಗಳು ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಎರಡು ಗುಂಪುಗಳು ಹುಟ್ಟಿಕೊಂಡಿದ್ದು, ಅವುಗಳ ಮಧ್ಯೆ ವೈಷಮ್ಯ ಬೆಳೆದಿದೆ. ಆಗಾಗ ಗಲಾಟೆಯೂ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ವಿವಾದಿತ ಜಾಗದ ಪಕ್ಕದಲ್ಲೇ ಉದ್ಯಾನವಿದ್ದು, ಈ ಹಿಂದೆಯೇ ಅಲ್ಲೊಂದು ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅಷ್ಟಾದರೂ ಭಾನುವಾರ ಬೆಳಿಗ್ಗೆ ವಿವಾದಿತ ಜಾಗದ ರಸ್ತೆಯ ಮಧ್ಯದಲ್ಲೇ ಮತ್ತೊಂದು ಪ್ರತಿಮೆ ನಿಲ್ಲಿಸಲಾಗಿದೆ. ಅದನ್ನು ಪ್ರಶ್ನಿಸಿದ ಸ್ಥಳೀಯ ಯುವತಿ, ಮೊಬೈಲ್‌ನಲ್ಲಿ ಪ್ರತಿಮೆಯ ವಿಡಿಯೊ ಮಾಡುತ್ತಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಹಾಗೂ ಸಹಚರರು, ಯುವತಿಯನ್ನು ರಸ್ತೆಯಲ್ಲೇ ಎಳೆದಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೊಬೈಲ್‌ ಕಸಿದುಕೊಂಡು ಹಲ್ಲೆಗೂ ಯತ್ನಿಸಿದ್ದಾರೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ’.

‘ಯುವತಿ ದೂರು ನೀಡುತ್ತಿದ್ದಂತೆ ಆರೋಪಿಯನ್ನು ಬಂಧಿಸಿ, ಮೊಬೈಲ್ ವಾಪಸ್ ಕೊಡಿಸಲಾಗಿದೆ. ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT