ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೀಣಿಸಿದ ಮೌಲ್ಯಯುತ ರಾಜಕಾರಣಿಗಳ ಸಂಖ್ಯೆ: ಎಚ್.ಎನ್. ನಾಗಮೋಹನದಾಸ್

Published 22 ಆಗಸ್ಟ್ 2023, 16:03 IST
Last Updated 22 ಆಗಸ್ಟ್ 2023, 16:03 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡವರು, ರೈತರು ಮತ್ತು ಕಾರ್ಮಿಕರನ್ನು ಪ್ರತಿನಿಧಿಸುತ್ತಿದ್ದ ಶಾಂತವೇರಿ ಗೋಪಾಲಗೌಡ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಹೇಳಿದರು.

ಕನ್ನಡ ಜನಶಕ್ತಿ ಕೇಂದ್ರ ಮಂಗಳವಾರ ಆಯೋಜಿಸಿದ್ದ ‘ಬೆಳ್ಳಿ ಸಂಭ್ರಮದ ಶಾಂತವೇರಿ ಗೋಪಾಲಗೌಡ’ ಪ್ರಶಸ್ತಿಯನ್ನು ಸಾಹಿತಿ ಬಿ. ಜಯಪ್ರಕಾಶ ಗೌಡ ಅವರಿಗೆ ಪ್ರದಾನ ಮಾಡಿ ಮಾತನಾಡಿದ ಅವರು, ‘ಶಾಂತವೇರಿ ಗೋಪಾಲಗೌಡರು ಹೋರಾಟದ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. ಆದರೆ, ಇಂದು ಜಾತಿ, ಧರ್ಮ, ಹಣ, ತೋಳ್ಬಲದ ಮೂಲಕ ಚುನಾವಣೆಗಳು ನಡೆಯುತ್ತಿವೆ. ಗೋಪಾಲಗೌಡ ಅವರಂತಹ ಮಹನೀಯರಿಗೆ ಸಾಕ್ಷಿಯಾಗಿದ್ದ ವಿಧಾನಸಭೆಯಲ್ಲಿ ಇಂದು ಶೇ 97ರಷ್ಟು ಕೋಟ್ಯಧಿಪತಿಗಳು, ಶೇ 55ರಷ್ಟು ಜನ ಕ್ರಿಮಿನಲ್ ಪ್ರಕರಣ ಹಿನ್ನಲೆಯವರು, ಶೇ 31ರಷ್ಟು ಜನ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಇದ್ದಾರೆ’ ಎಂದು ತಿಳಿಸಿದರು.

‘ವಿಧಾನಸಭೆ, ಲೋಕಸಭೆಯಲ್ಲಿ ಗುಣಾತ್ಮಕವಾದ ಚರ್ಚೆಗಳು ನಡೆಯುತ್ತಿಲ್ಲ. 1952ರಲ್ಲಿ ಗೋಪಾಲಗೌಡ ಅವರು ವಿಧಾನಸಭೆಯಲ್ಲಿ ಎತ್ತಿದ ಪ್ರಶ್ನೆಗಳು ನಂತರದ ದಶಕಗಳಲ್ಲಿ ಕಾನೂನುಗಳಾಗಿ, ಯೋಜನೆಗಳಾಗಿವೆ. ತಾತ್ವಿಕತೆ, ಬದ್ಧತೆ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ, ಜಾತ್ಯತೀತ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಗುಣಮಟ್ಟದ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಬೇಕಿದೆ’ ಎಂದರು.

‘ಬಿ. ಜಯಪ್ರಕಾಶ ಗೌಡ ಅವರು ಮಂಡ್ಯದ ಕರ್ನಾಟಕ ಸಂಘ ಸ್ಥಾಪಿಸಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನ್ಯಾಯಸಮ್ಮತವಾಗಿದೆ’ಎಂದು ಹೇಳಿದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ‘ಶಾಂತವೇರಿ ಗೋಪಾಲಗೌಡ ಅವರ ಬದುಕು ಇಂದಿಗೂ ಪ್ರಸ್ತುತವಾಗಿದೆ. ಅವರ ತತ್ವ ಸಿದ್ಧಾಂತಗಳು ಇಂದಿನ ಜನಪ್ರತಿನಿಧಿಗಳು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. 

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ‌ ರಾಮೇಗೌಡ, ಶಾಂತವೇರಿ ರಾಮಮನೋಹರ್, ಮಲ್ಲಿಕಾರ್ಜುನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT