ಬೆಂಗಳೂರು: ರಾಜಾಜಿನಗರದ ಪಾರ್ಶ್ವನಾಥ ಜೈನ್ ಶ್ವೇತಾಂಬರ ಮಂದಿರ ಟ್ರಸ್ಟ್ ವತಿಯಿಂದ ಡಿ.2ರಂದು ಅವಳಿ ಬಾಲಮುನಿಗಳಾದ ನಮಿಚಂದ್ರಸಾಗರ್ ಮತ್ತು ನೇಮಿಚಂದ್ರಸಾಗರ್ ಅವರ ಬಾಲಶತಾವಧಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೆಡಿಟೇಷನ್ ರಿಸರ್ಚ್ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿಷ್ಠಾನದ ಸದಸ್ಯ ಕಮಲ್ ಜೈನ್, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶತಾವಧಾನದ ಮಾಹಿತಿ ನೀಡಿದರು.
‘ಅರಮನೆ ಮೈದಾನದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ, ಅವಳಿ ಬಾಲಮುನಿಗಳ ಸ್ಮರಣಶಕ್ತಿಯ ಸಾಮರ್ಥ್ಯವನ್ನು ಪರೀಕ್ಷಿಸಬಹುದು’ ಎಂದರು.
‘ಜೈನ ಧರ್ಮದ 5,000 ಶ್ಲೋಕಗಳಲ್ಲದೆ ಭಗವದ್ಗೀತೆ, ಖುರಾನ್, ಬೈಬಲ್ ಹಾಗೂ ಗುರುಗ್ರಂಥ ಸಾಹೀಬ್ ಧರ್ಮ ಗ್ರಂಥಗಳ ಕುರಿತು ಯಾವುದೇ ಪ್ರಶ್ನೆಗಳನ್ನು ಯಾವುದೇ ಭಾಷೆಯಲ್ಲಿ ಕೇಳಿದರೂ ಅದಕ್ಕೆ ಸಮರ್ಥವಾಗಿ ಉತ್ತರಿಸಲಿದ್ದಾರೆ’ ಎಂದು ಅವರು ಹೇಳಿದರು.
‘ಮುನಿಗಳು,ಗುಜರಾತಿನ ಸೂರತ್ ನಗರದ ಪಿಯೂಷ್ಭಾಯ್ ಮತ್ತು ಸೋನಲ್ಬೆನ್ ಅವರ ಅವಳಿ ಪುತ್ರರಾಗಿದ್ದಾರೆ.ಕೇವಲ ಒಂದನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, 9ನೇ ವಯಸ್ಸಿನಲ್ಲಿ ಸೂರತ್ ನಗರದಲ್ಲಿ ಸನ್ಯಾಸ ಜೀವನ ಸ್ವೀಕರಿಸಿದರು. ಈಗಾಗಲೇ 5 ಸಾವಿರ ಕಿ.ಮೀ ಪಾದಯಾತ್ರೆ ಮಾಡಿದ್ದಾರೆ’ ಎಂದು ತಿಳಿಸಿದರು.