ಕಾಫಿ ಬೀಜ, ಕಾಳುಮೆಣಸುವಿನಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಸೋಲಿಗ ಯುವಕರು ಕಂಪನಿ ಸ್ಥಾಪಿಸಿರುವುದು ಮಾತ್ರವಲ್ಲದೆ, ₹1 ಕೋಟಿ ಮೊತ್ತದ ವಹಿವಾಟು ಕೂಡ ನಡೆಸಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೇ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸಿದ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕಿನ ರೈತರು, ‘ಬಿಳಿಗಿರಿ ಸೋಲಿಗಾಸ್ ಪ್ರೊಡ್ಯೂಸರ್ ಕಂಪನಿ’ ರಚಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ, ಕಾಫಿಮಂಡಳಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ನಬಾರ್ಡ್ನಿಂದ ನೆರವು ಪಡೆದ ಈ ಯುವ ರೈತರು, ಅದನ್ನು ವ್ಯವಸಾಯ ಮತ್ತು ಮಾರಾಟ ಕ್ರಮದಲ್ಲಿ ಅಳವಡಿಸಿಕೊಂಡು ಯಶಸ್ವಿಯೂ ಆಗಿದ್ದಾರೆ.