ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಸಲುವಾಗಿ ಪುತ್ರ ಭಾನುವಾರ ಐದಾರು ಆಸ್ಪತ್ರೆಗಳಿಗೆ ಅಲೆದಾಡಿದರು.
ಶಂಕರಮಠ ವಾರ್ಡ್ನ ಲಕ್ಷ್ಮೀನಗರದ ನಿವಾಸಿ ರವಿ ಅವರ ತಾಯಿಗೆ (70 ವರ್ಷ) ಅನಾರೋಗ್ಯ ಕಾಣಿಸಿಕೊಂಡಿತ್ತು. ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಅವರನ್ನು ದಾಖಲಿಸಲು ಯಶವಂತಪುರದ ಪೀಪಲ್ ಟ್ರೀ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಹಾಸಿಗೆ ಲಭ್ಯ ಇಲ್ಲ ಎಂಬ ಕಾರಣಕ್ಕೆ ರಾಮಯ್ಯ ಆಸ್ಪತ್ರೆಗೆ, ಬಳಿಕ ಅನನ್ಯ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮಂಜುನಾಥ ನಗರದ ಕಾರ್ಡಿಯೊ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಎಕ್ಸ್– ರೇ ತೆಗೆದ ವೈದ್ಯಕೀಯ ಸಿಬ್ಬಂದಿ ರೋಗಿಯನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.
‘ತಾಯಿಯನ್ನು ಕೆ.ಸಿ.ನಗರದ ಆಸ್ಪತ್ರೆಗೆ ಕರೆತಂದಿದ್ದೇನೆ. ಅವರ ಚಿಕಿತ್ಸೆಗೆ ತುರ್ತು ನಿಗಾ ಘಟಕಕ್ಕೆ ದಾಖಲಿಸಬೇಕು. ಆದರೆ, ಈ ಆಸ್ಪತ್ರೆಯಲ್ಲೂ ತುರ್ತು ನಿಗಾ ಘಟಕದ ಹಾಸಿಗೆಗಳೆಲ್ಲ ಭರ್ತಿಯಾಗಿವೆ ಎನ್ನುತ್ತಿದ್ದಾರೆ. ಹಾಗಾಗಿ ಮತ್ತೆ ಬೇರೆ ಆಸ್ಪತ್ರೆಯನ್ನು ಹುಡುಕಬೇಕಾದ ಸ್ಥಿತಿ ಎದುರಾಗಿದೆ’ ಎಂದು ರವಿ ‘ಪ್ರಜಾವಾಣಿ’ ಜೊತೆ ಅಸಹಾಯಕತೆ ತೋಡಿಕೊಂಡರು.
‘ತಾಯಿಗೆ ಇನ್ನೂ ಕೋವಿಡ್ ಪರೀಕ್ಷೆ ಮಾಡಿಸಿಲ್ಲ. ಹಾಗಾಗಿ ಕೋವಿಡ್ ಇದೆಯೋ ಇಲ್ಲವೋ ಗೊತ್ತಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.