ಬೆಂಗಳೂರು:ಆ ಮಕ್ಕಳಲ್ಲಿ ಉತ್ಸಾಹವಿತ್ತು. ತಾವು ಕೈಯಾರೆ ತಯಾರಿಸಿದ್ದ ವಸ್ತುಗಳನ್ನು ಬೇರೆಯವರು ನೋಡುತ್ತಿದ್ದಾಗ ಅವರ ಮುಖದಲ್ಲಿ ಹೆಮ್ಮೆ ಮನೆ ಮಾಡಿತ್ತು. ಅವರು ಹೊಸ ಪಾಠ ಕಲಿತರು, ಹೊಸ ಆಟ ಆಡಿದರು. ಜಾತ್ರೆಯಲ್ಲಿ ಪಾಲ್ಗೊಂಡಂತೆ ಸಂಭ್ರಮಿಸಿದರು.
ಸ್ಪಾಸ್ಟಿಕ್ಸ್ ಸೊಸೈಟಿ ಆಫ್ ಕರ್ನಾಟಕ (ಎಸ್ಎಸ್ಕೆ) ಸರ್ಕಾರೇತರ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ನಡೆದ ‘ಚಳಿಗಾಲದ ಸಂತೆ’ ಯಲ್ಲಿ ಕಂಡು ಬಂದ ದೃಶ್ಯಗಳಿವು.
ಎಸ್ಎಸ್ಕೆ ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತಯಾರಿಸಿದ ಕರಕುಶಲ ವಸ್ತುಗಳು, ವಿವಿಧ ತಿನಿಸು, ಉಡುಪುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕರಕುಶಲ ವಸ್ತುಗಳ ಪ್ರದರ್ಶನ ಮಾತ್ರವಲ್ಲದೆ, ಮಕ್ಕಳಿಗಾಗಿ ಮೋಜಿನ ಆಟಗಳು, ಜಾದೂ, ಸಂಗೀತದಂತಹ ಮನರಂಜನಾ ಕಾರ್ಯಕ್ರಮ
ಗಳನ್ನು ಆಯೋಜಿಸಲಾಗಿತ್ತು.
ಉಪಕರಣ ಮಾರಾಟ:ಎಸ್ಎಸ್ಕೆ ಶಾಲೆಯ ಸುಮಾರು 100 ಮಳಿಗೆಗಳು ಮತ್ತು ವಿವಿಧ ಸಂಘ–ಸಂಸ್ಥೆಗಳ 50ಕ್ಕೂ ಹೆಚ್ಚು ಮಳಿಗೆಗಳು ಸಂತೆಯ ಸಂಭ್ರಮವನ್ನು ಹೆಚ್ಚಿಸಿದ್ದವು.
ವಿಶೇಷ ಮಕ್ಕಳಿಗೆ ನೆರವಾಗುವ ಕಲಿಕಾ ಉಪಕರಣ ಮತ್ತು ಶಿಕ್ಷಕರಿಗಾಗಿ ಬೋಧನಾ ಸಲಕರಣೆಗಳ ಮಾರಾಟವೂ ನಡೆಯಿತು. ಮಾರಾಟದಿಂದ ಬಂದ ಹಣವನ್ನು ಎಸ್ಎಸ್ಕೆ ಶಾಲೆಗೆ ನೀಡಲಾಗುತ್ತದೆ.
ಸಾರ್ವಜನಿಕರಲ್ಲಿ ಮತ್ತು ದೇಣಿಗೆ ನೀಡುವ ವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಸ್ಥೆಯು ನರಸ್ನಾಯು ಮತ್ತು ಬೆಳವಣಿಗೆಯ ದೌರ್ಬಲ್ಯ ಹೊಂದಿರುವ ಮಕ್ಕಳಿಗಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ‘ಚಳಿಗಾಲದ ಸಂತೆ’ಯನ್ನು ಏರ್ಪಡಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.