ರಾಜರಾಜೇಶ್ವರಿನಗರ: ‘ಗ್ರಾಮೀಣ ಸಂಸ್ಕೃತಿ ಹಾಗೂ ಜಾನಪದ ಕಲೆಯಿಂದ ಮಾತ್ರ ದೇಶದ ಸಂಸ್ಕೃತಿ ಮತ್ತಷ್ಟು ಗಟ್ಟಿಯಾಗಿ ಬೆಳೆದಿದೆ. ನಾವೆಲ್ಲರೂ ಒಗ್ಗೂಡಿ ನಮ್ಮ ಸಂಸ್ಕೃತಿ, ಪರಂಪರೆ, ಜಾನಪದ ಕಲೆಯನ್ನು ಉಳಿಸಬೇಕು’ ಎಂದುಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕನ್ನಲ್ಲಿಯ ಅಲ್ಲಮ ಕಲಾ ಶಾಲೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ‘ಸುಗ್ಗಿಹುಗ್ಗಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಲ್ಲಿಯ ವೀರಶೈವ ನಿತ್ಯಾನ್ನ ದಾಸೋಹ ಸಮಿತಿಯ ಅಧ್ಯಕ್ಷ ಎಸ್.ಶಾಂತರಾಜು,‘ ಜಾನಪದ ಕಲೆ, ನಾಟಕ, ಧಾರ್ಮಿಕ ಸಂಸ್ಕೃತಿಯು ಭಾವೈಕ್ಯತೆ, ಸಹೋದರತೆ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತವೆ. ಕಲೆಯಿಂದ ಮಾತ್ರ ಸಂಸ್ಕಾರ, ವಿಶ್ವಾಸ ಬೆಳೆಯುತ್ತದೆ’ ಎಂದರು.
ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ,‘ಯುವಜನಾಂಗಕ್ಕೆ ನಾಡಿನ ಜಾನಪದ ಕಲೆ, ಕ್ರೀಡೆ, ಸಂಸ್ಕೃತಿಯನ್ನು ತಿಳಿಸುವ ಅಗತ್ಯವಿದೆ. ಇದಕ್ಕಾಗಿ ಪ್ರತಿವರ್ಷ ರಾಜ್ಯಮಟ್ಟದ ಸುಗ್ಗಿಹುಗ್ಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.