ಬೆಂಗಳೂರು: ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಅವು ಈಗ ಸ್ಟ್ರಾಂಗ್ ರೂಂನಲ್ಲಿ ಭದ್ರಗೊಂಡಿವೆ. ಮೂರು ಸ್ಟ್ರಾಂಗ್ ರೂಂಗಳಿಗೆ ಕೇಂದ್ರ ಮೀಸಲು ಪಡೆ ಮತ್ತು ರಾಜ್ಯ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ವಿಠಲ್ ಮಲ್ಯ ರಸ್ತೆಯಲ್ಲಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸ್ಟ್ರಾಂಗ್ ರೂಂ, ವಸಂತನಗರದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಸ್ಟ್ರಾಂಗ್ ರೂಂ ಮತ್ತು ಜಯನಗರದ ಎಸ್ಎಸ್ಎಂಆರ್ವಿ ಕಾಲೇಜಿನಲ್ಲಿ ದಕ್ಷಿಣ ಕ್ಷೇತ್ರದ ಸ್ಟ್ರಾಂಗ್ ರೂಂ ತೆರೆಯಲಾಗಿದೆ.
ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳನ್ನು ಕ್ರಮವಾಗಿ ಜೋಡಿಸಿ ಸೀಲ್ ಸಹಿತ ಬೀಗ ಹಾಕಲಾಗಿದೆ. ಅವುಗಳ ಮುಂಭಾಗ ಕೇಂದ್ರ ಮೀಸಲು ಪಡೆಯ ಪೊಲೀಸರು ದಿನದ 24 ಗಂಟೆಯೂ ಕಾವಲು ಇದ್ದಾರೆ. ಒಳ ಆವರಣದಲ್ಲಿ ಕೆಎಸ್ಆರ್ಪಿ ಸಿಬ್ಬಂದಿ ಮತ್ತು ಹೊರ ಭಾಗದಲ್ಲಿ ರಾಜ್ಯ ಪೊಲೀಸರು ಕಾವಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಸ್ಟ್ರಾಂಗ್ ರೂಂ ಮುಂಭಾಗ ಸೇರಿದಂತೆ ಮತಗಟ್ಟೆ ಇರುವ ಕಟ್ಟಡಗಳಲ್ಲಿ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಿರಿಯ ಅಧಿಕಾರಿಗಳು ಆಗಾಗ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಲಿದ್ದಾರೆ. ಭದ್ರತೆ ಬಗ್ಗೆ ಅನುಮಾನವಿದ್ದರೆ ಅಭ್ಯರ್ಥಿಗಳು ಕೂಡ ಸ್ಟ್ರಾಂಗ್ ರೂಂಗಳಿಗೆ ಪ್ರತ್ಯೇಕ ಬೀಗ ಹಾಕಿಕೊಳ್ಳಬಹುದು ಎಂದು ಅವರು ಹೇಳಿದರು.