ಬೆಂಗಳೂರು: ‘ನಮ್ಮದು ಹೇಡಿ ಸರ್ಕಾರವಲ್ಲ, ರಾಜಾ ಹುಲಿ ಸರ್ಕಾರ. ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ’ ಎಂದು ಸರ್ಕಾರದ ಮುಖ್ಯ ಸಚೇತಕ ಸುನಿಲ್ ಕುಮಾರ್ ಹೇಳಿದರು.
ವಿಧಾನಸಭೆಯಲ್ಲಿ ಮಂಗಳೂರು ಗೋಲಿಬಾರ್ ಪ್ರಕರಣದ ಕುರಿತು ಮಾತನಾಡಿದ ಅವರು, ವಿರೋಧ ಪಕ್ಷಗಳು ಈ ಸಂಘಟನೆಗಳ ಪರವಾಗಿ ಮಾತನಾಡುವ ಮೂಲಕ ಪೊಲೀಸರ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
‘ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಮುಗಿಯುವ ಮೊದಲೇವಿರೋಧ ಪಕ್ಷದವರು ಗಲಭೆಕೋರರಿಗೆ ಅಮಾಯಕರು ಎಂಬ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಗಲಭೆ ಹಿಂದಿನ ಶಕ್ತಿಗಳು ಸೌದಿ ಅರೇಬಿಯಾದಲ್ಲಿದ್ದು, ಅವರು ನಮಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ರೀತಿ ಬೆದರಿಕೆ ಹಾಕುತ್ತಿರುವವರು ಯಾರು? ಇವರನ್ನು ನೀವು ಏಕೆ ಸಮರ್ಥಿಸುತ್ತೀರಿ’ ಎಂದು ಸುನಿಲ್ ಪ್ರಶ್ನಿಸಿದರು.
ಆಗ ಮಧ್ಯ ಪ್ರವೇಶಿದ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ, ‘ದೇಶದ್ರೋಹಿ ಸಂಘಟನೆಗಳಿಗೆ ಅದರಲ್ಲೂ ಪಿಎಫ್ಐಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎರಡು– ಮೂರು ಸಂಘಟನೆಗಳು ಅಶಾಂತಿಯ ವಾತಾವರಣ ಸೃಷ್ಟಿಸಿವೆ.ಡಿ.17 ರಂದು ಕಾಂಗ್ರೆಸ್ ಶಾಸಕ ಖಾದರ್ ಅವರು ಸಿಎಎ ಜಾರಿ ಮಾಡಿದರೆ ದೇಶ ಹೊತ್ತಿ ಉರಿಯುತ್ತದೆ ಎಂದು ಹೇಳಿಕೆ ನೀಡಿದ್ದೇ ಡಿ.19ರ ಗಲಭೆಗೆ ಪ್ರಚೋದನೆ ಆಯಿತು. ಆ ಗಲಭೆಗೆ ಪಿಎಫ್ಐ ಮತ್ತು ಎಸ್ಡಿಪಿಐ ಕಾರಣವಾಗಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.