ಈಜಿಪುರ ಮೇಲ್ಸೇತುವೆಗೆ ಮತ್ತೆ ಟೆಂಡರ್

ಬೆಂಗಳೂರು: ಕೋರಮಂಗಲ ಹೊರವರ್ತುಲ ರಸ್ತೆಯ ಎಲಿವೇಟೆಡ್ ಕಾರಿಡಾರ್ ಯೋಜನೆಗೆ (ಈಜಿಪುರ ಮೇಲ್ಸೇತುವೆ) ಬಿಬಿಎಂಪಿ ಮತ್ತೆ ಟೆಂಡರ್ ಕರೆದಿದೆ.
ಹೈಕೋರ್ಟ್ ಆದೇಶವಿದ್ದರೂ ಎರಡನೇ ಬಾರಿಗೆ ಕರೆದಿದ್ದ ಟೆಂಡರ್ನ ತಾಂತ್ರಿಕ್ ಬಿಡ್ ತೆರೆಯದೆ ಅದನ್ನು ರದ್ದು ಮಾಡಲಾಗಿದೆ. ಇದೀಗ ಹೊಸದಾಗಿ ಟೆಂಡರ್ ಕರೆಯಲಾಗಿದ್ದು, ಜ.23ಕ್ಕೆ ಟೆಂಡರ್ ಸಲ್ಲಿಸಲು ಅಂತಿಮ ದಿನವಾಗಿದ್ದು, 15 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಈಜಿಪುರ ಒಳವರ್ತುಲ ರಸ್ತೆ ಜಂಕ್ಷನ್, ಸೋನಿ ವರ್ಲ್ಡ್, ಕೇಂದ್ರೀಯ ಸದನ ಜಂಕ್ಷನ್ ಮೂಲಕ 100 ಅಡಿ ಒಳವರ್ತುಲ ರಸ್ತೆ, ಕೋರಮಂಗಲದವರೆಗಿನ ಬಾಕಿ ಇರುವ ಮೇಲ್ಸೇತುವೆ ಕೆಲಸವನ್ನು ಪೂರ್ಣಗೊಳಿಸಬೇಕಿದೆ. ₹143.80 ಕೋಟಿಯ ಟರ್ನ್ಕೀ ಯೋಜನೆಯಾಗಿದ್ದು, ಮೊತ್ತವನ್ನು ಹೆಚ್ಚಿಸಲಾಗುವುದಿಲ್ಲ ಎಂದು ಟೆಂಡರ್ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿಯಲ್ಲಿ ಡಿ.17ರಂದು ‘ಈಜಿಪುರ ಮೇಲ್ಸೇತುವೆ ಟೆಂಡರ್ಗೆ ತಡೆ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈಜಿಪುರ ಮೇಲ್ಸೇತುವೆ 2.5 ಕಿ.ಮೀ. ಉದ್ದದ ಕಾರಿಡಾರ್ ಆಗಿದ್ದು, 2014ರಲ್ಲಿ ಇದರ ಯೋಜನೆ ರೂಪಿಸಲಾಗಿತ್ತು. 2017ರಲ್ಲಿ ₹157.66 ಕೋಟಿಗೆ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. 2019ರೊಳಗೆ ಯೋಜನೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಗುತ್ತಿಗೆದಾರರು ವಿಳಂಬ ಮಾಡಿದರು. ನಾಲ್ಕು ವರ್ಷ ಏಳು ತಿಂಗಳಾದರೂ ಶೇ 42ರಷ್ಟು ಮಾತ್ರ ಕಾಮಗಾರಿ ಮುಗಿದಿತ್ತು. ₹75.11 ಕೋಟಿ ಹಣವನ್ನೂ ಅವರಿಗೆ ಪಾವತಿ ಮಾಡಲಾಗಿತ್ತು. ಈಗ ಉಳಿದ ಕಾಮಗಾರಿಗೆ ₹143.80 ಕೋಟಿ ವೆಚ್ಚ ಮಾಡಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.