ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೋರಾಟ ಅಂತಿಮ ಘಟ್ಟ ತಲುಪಿದೆ: ಸುಧಾಕರ್

ಬಿಎಂಸಿಆರ್‌ಐ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
Last Updated 16 ಫೆಬ್ರುವರಿ 2021, 21:42 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಹೋರಾಟದಲ್ಲಿ ಅಂತಿಮ ಘಟ್ಟವನ್ನು ಈಗ ನಾವು ತಲುಪಿದ್ದೇವೆ. 10 ತಿಂಗಳ ಬಳಿಕ ಬಂದಿರುವ ಲಸಿಕೆಯು ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (ಬಿಎಂಸಿಆರ್‌ಐ) ನಗರದಲ್ಲಿ ಮಂಗಳವಾರ ಏರ್ಪಡಿಸಿದ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಣೆ ಮಾಡಿದರು.

ವೈದ್ಯಕೀಯ ತಜ್ಞ ಡಾ.ಎಸ್. ಶ್ರೀಕಂಠ ಮಾತನಾಡಿ, ‘ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ಸು ಮತ್ತು ವೈಫಲ್ಯದ ಬಗ್ಗೆ ಚಿಂತಿಸುವುದನ್ನು ಬಿಟ್ಟು, ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. ಆಗ ಅದರ ಪ್ರತಿಫಲ ನಮಗೆ ದೊರೆಯುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನಿಗೆ ಇದನ್ನೇ ಹೇಳಿದ್ದಾನೆ. ಭಾರತವು ಉಳಿದ ದೇಶಗಳಿಗಿಂತ ವಿಭಿನ್ನವಾಗಿದ್ದು, ಇಲ್ಲಿ ಸೇವೆ ಸಲ್ಲಿಸಲು ನಮಗೆ ವಿಫುಲ ಅವಕಾಶಗಳಿವೆ. ವಿಜ್ಞಾನ ಮತ್ತು ಆಧ್ಯಾತ್ಮದ ಸಮ್ಮಿಲನವನ್ನು ಇಲ್ಲಿ ಮಾತ್ರ ಕಾಣಬಹುದು’ ಎಂದರು.

ಬೊಮ್ಮನಹಳ್ಳಿ: ಕೋವಿಡ್‌ ಪ್ರಕರಣ ಸಂಖ್ಯೆ 103ಕ್ಕೆ ಹೆಚ್ಚಳ
ಬೊಮ್ಮನಹಳ್ಳಿ ವಲಯದ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ 103ಕ್ಕೆ ಹೆಚ್ಚಳವಾಗಿದೆ. ಸೋಂಕಿತರಲ್ಲಿ ಆರು ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲ 60 ವರ್ಷ ಮೇಲಿನವರು.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಇತ್ತೀಚೆಗೆ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ 28 ಮಂದಿಗೆ ಕೋವಿಡ್‌ ದೃಢಪಟ್ಟಿತ್ತು. ಹಾಗಾಗಿ ಕಟ್ಟಡದಲ್ಲಿ ವಾಸವಿದ್ದ 1,052 ನಿವಾಸಿಗಳನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಒಟ್ಟು 103 ಕೊರೊನಾ ಸೋಂಕು ಹೊಂದಿರುವುದು ಪತ್ತೆಯಾಗಿದೆ.

‘ಕೋವಿಡ್‌ ದೃಢಪಟ್ಟವರಲ್ಲಿ 96 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು. ಸಭೆ ಸಮಾರಂಭಗಳಲ್ಲಿ ವಯಸ್ಸಾದವರು ಭಾಗವಹಿಸುವುದನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂತಪ್ಪದೆ ಪಾಲನೆ ಮಾಡಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥಪ್ರಸಾದ್‌ ತಿಳಿಸಿದರು.

ಆರ್‌ಡಬ್ಲ್ಯುಎಗಳ ಜೊತೆ ವಿಡಿಯೊ ಸಂವಾದ: ಒಂದೇ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ 100ಕ್ಕೂ ಅಧಿಕ ಮಂದಿಗೆ ಕೋವಿಡ್‌ ಹರಡಿದ ಪ್ರಕರಣವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ( ಆರ್‌ಡಬ್ಲ್ಯುಎ) ಪ್ರಮುಖರ ಜೊತೆ ಪಾಲಿಕೆ ಆಯುಕ್ತರು ಮಂಗಳವಾರ ವಿಡಿಯೊ ಸಂವಾದ ನಡೆಸಿದರು. ಕೋವಿಡ್ ಹರಡುವಿಕೆಯನ್ನು ತಡೆಯಲು ಪಾಲಿಕೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಭಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ
ನೀಡಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ, ಕಿರು ಸಭಾಂಗಣಗಳಲ್ಲಿ ಸಭೆ, ಸಮಾರಂಭಗಳನ್ನು ಆಯೋಜಿಸುವಾಗ ಅಲ್ಲಿ ಸೇರುವ ಜನರ ಸಂಖ್ಯೆಗೆ ಅನುಗುಣವಾಗಿ ಗಾಳಿಯಾಡುವ ವ್ಯವಸ್ಥೆ ಮಾಡಿಕೊಂಡಿರುವುದಿಲ್ಲ. ಕೋವಿಡ್‌ ಇರುವ ಒಬ್ಬ ವ್ಯಕ್ತಿ ಬಂದರೂ ಅವರಿಂದ ಇತರರಿಗೆ ಸುಲಭವಾಗಿ ಸೋಂಕು ಹರಡುತ್ತದೆ. ಸಭಾಂಗಣಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇದ್ದರೆ ಸೋಂಕು ಹರಡುವ ವೇಗ ಇನ್ನಷ್ಟು ತೀವ್ರವಾಗಿರುತ್ತದೆ’ ಎಂದು ಆಯುಕ್ತರು ತಿಳಿಸಿದರು.

‘ಸಾಮಾಜಿಕ ಕಾರ್ಯಕ್ರಮಗಳಲ್ಲಿ ಜನರು ಪರಸ್ಪರ 3.25 ಚ.ಮೀ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಎಲ್ಲರೂ ಬಳಸುವ ಜಾಗ, ವ್ಯಾಯಾಮ ಕೇಂದ್ರಗಳಲ್ಲೂ ಕೋವಿಡ್‌ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮಗಳು ಕೈಗೊಳ್ಳಬೇಕು’ ಎಂದರು.

ವಿವಿಧ ಆರ್‌ಡಬ್ಲ್ಯುಎಗಳ 300 ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು. ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್, ವಿಶೇಷ ಆಯುಕ್ತರು (ಕಸ ವಿಲೇವಾರಿ) ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ಸಲಹೆಗಳನ್ನು ನೀಡಿದರು.

‘ಸೋಂಕು ಲಕ್ಷಣವಿದ್ದರೆ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ’
ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡುಬಂದರೆ ಇತರರಿಂದ ಸ್ವಯಂ ಪ್ರತ್ಯೇಕಗೊಂಡು ಆರ್.ಟಿ.ಪಿ.ಸಿ.ಆರ್ ಅಥವಾ ಆರ್.ಎ.ಟಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಕೋರಿದರು.

‘ಪಾಲಿಕೆಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ 200 ಸಂಚಾರಿ ಪರೀಕ್ಷಾ ತಂಡಗಳಲ್ಲಿ ಈ ಪರೀಕ್ಷೆ ಉಚಿತ. ಕೊರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಹಾಸಿಗೆ ಕೊರತೆ ಈಗಿಲ್ಲ. ನುರಿತ ವೈದ್ಯರೂ ಲಭ್ಯ ಇದ್ದಾರೆ’ ಎಂದರು.

‘ಇನ್ನು ಮುಂದೆ ಸೀಲ್‌ಡೌನ್‌ ಇಲ್ಲ’
‘ನಗರದ ನಿವಾಸಿಗಳ ಸಹಕಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ. ಕೋವಿಡ್ ಪ್ರಕರಣಗಳು ಕಂಡುಬರುವ ಪ್ರದೇಶಗಳಲ್ಲಿ ಇನ್ನು ಸೀಲ್ ಡೌನ್ ಮಾಡುವುದಿಲ್ಲ. ಮನೆ ಮುಂದೆ ಭಿತ್ತಿಪತ್ರ ಅಂಟಿಸುವ ಅಥವಾ ಬ್ಯಾರಿಕೇಡ್ ಅಳವಡಿಸುವ ಕ್ರಮಗಳನ್ನೂ ಕೈಬಿಟ್ಟಿದ್ದೇವೆ. ಕೋವಿಡ್‌ ದೃಢಪಟ್ಟರೆ ಏನು ಮುನ್ನೆಚ್ಚರಿಕೆ ವಹಿಸಬೇಕೆಂಬ ಬಗ್ಗೆ ನಾಗರಿಕರಿಗೆ ಅರಿವಿದೆ’ ಎಂದು ಮಂಜುನಾಥ ಪ್ರಸಾದ್‌ ಹೇಳಿದರು.

‘ಸೋಂಕಿತರ ಜೊತೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದವರಿಗೆ ಕೋವಿಡ್ ಪರೀಕ್ಷೆ ಮಾಡಿ ಅವರ ಪ್ರತ್ಯೇಕವಾಸಕ್ಕೆ ವ್ಯವಸ್ಥೆ ಕಲ್ಪಿಸುತ್ತೇವೆ. ಏಳೂ ದಿನಗಳ ನಂತರ ಅವರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುತ್ತೇವೆ. ಅವರಲ್ಲಿ ಸೋಂಕು ಪತ್ತೆಯಾಗದಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ಬಿಬಿಂಎಂಪಿ ಆಯುಕ್ತರು ತಿಳಿಸಿದರು.

‘ನಿತ್ಯ 100ರಿಂದ 200 ಪ್ರಕರಣಗಳಷ್ಟೇ ಪತ್ತೆ’
‘ನಗರದಲ್ಲಿ ಆರೇಳು ತಿಂಗಳುಗಳ ಹಿಂದೆ ನಿತ್ಯ ಸರಾಸರಿ 6 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ಸಂಖ್ಯೆ ಈಗ100 ರಿಂದ 200 ಪ್ರಕರಣಗಳಿಗೆ ಇಳಿಕೆ ಕಂಡಿದೆ’ ಎಂದು ಆಯುಕ್ತರು ತಿಳಿಸಿದರು.

ಈ ಹಿಂದೆ ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾಗುತ್ತಿದ್ದ ಪ್ರಮಾಣ ಶೇ 24.15 ರಷ್ಟಿತ್ತು. ಈಗ ಈ ಪ್ರಮಾಣ ಶೇ 0.80ಕ್ಕೆ ಇಳಿಕೆ ಕಂಡಿದೆ. ಈಗಲೂ ನಿತ್ಯ 20 ಸಾವಿರದಿಂದ 25 ಸಾವಿರ ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದುವರೆಗೆ 72 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದೇ ರೀತಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೋವಿಡ್ ನಿಯಂತ್ರಿಸಲು ಸಹಕರಿಸಬೇಕು ಎಂದು ಅವರು ಕೋರಿದರು.

27 ಸಾವಿರ ಮಂದಿಗೆ ಮತ್ತೊಂದು ಡೋಸ್ ಲಸಿಕೆ
ರಾಜ್ಯದಲ್ಲಿ ಮಂಗಳವಾರ 15,490 ಮಂದಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ.

ಮೊದಲ ಡೋಸ್ ಲಸಿಕೆ ಪಡೆದವರಿಗೆ ಈಗ ಎರಡನೇ ಡೋಸ್ ಲಸಿಕೆ ವಿತರಿಸಲಾಗುತ್ತಿದೆ. ಮೊದಲ ದಿನವಾದ ಸೋಮವಾರ 11,985 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದರು. ಇದರಿಂದಾಗಿ ಎರಡು ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ ಎರಡು ಡೋಸ್‌ಗಳನ್ನು ಪೂರ್ಣಗೊಳಿಸಿದವರ ಸಂಖ್ಯೆ 27,475ಕ್ಕೆ ತಲುಪಿದೆ. ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯಲು ಮಂಗಳವಾರ 71,642 ಮಂದಿಯನ್ನು ಗುರುತಿಸಲಾಗಿತ್ತು. ಅದರಲ್ಲಿ 19,612 ಮಂದಿ ಮಾತ್ರ ಹಾಜರಾಗಿ ಲಸಿಕೆ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ ಈವರೆಗೆ ನಿಗದಿಪಡಿಸಲಾಗಿದ್ದ 8,21,939 ಆರೋಗ್ಯ ಕಾರ್ಯಕರ್ತರಲ್ಲಿ 4,12,822 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಿಂದ ಶೇ 50ರಷ್ಟು ಗುರಿ ಸಾಧ್ಯವಾಗಿದೆ. 2,90,763 ಮುಂಚೂಣಿ ಯೋಧರನ್ನು ಈವರೆಗೆ ಲಸಿಕೆ ಪಡೆಯಲು ಗುರುತಿಸಲಾಗಿತ್ತು. ಅವರಲ್ಲಿ 92,191 ಮಂದಿ ಹಾಜರಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಇದರಿಂದ ಶೇ 32ರಷ್ಟು ಗುರಿ ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT