ಬೆಂಗಳೂರು: ಎಲ್ಲಿ ನೋಡಿದರಲ್ಲಿ ರಂಗುರಂಗಿನ ಕಲಾಕೃತಿಗಳು, ಅವುಗಳ ಖರೀದಿಯಲ್ಲಿ ತೊಡಗಿರುವ ಕಲಾಸಕ್ತರು...
ನಗರದ ಕುಮಾರಕೃಪಾ ರಸ್ತೆಯಲ್ಲಿ ಹಾಗೂ ಆಸುಪಾಸಿನ ರಸ್ತೆಗಳಲ್ಲಿ ಕಂಡು ಬರುತ್ತಿರುವ ದೃಶ್ಯವಿದು. ನಗರದ ಅತ್ಯಂತ ಜನಾಕರ್ಷಣೆಯ ಕಾರ್ಯಕ್ರಮಗಳಲ್ಲೊಂದಾದ ಚಿತ್ರಸಂತೆಗೆ ಭಾನುವಾರ ಚಾಲನೆ ದೊರೆತಿದೆ. ರಂಗುರಂಗಿನ ಕಲಾಕೃತಿಗಳಿಂದ ಹಾಗೂ ಅವುಗಳ ಖರೀದಿ ಭರಾಟೆಯಿಂದ ಚಿತ್ರಸಂತೆ ಕಳೆಗಟ್ಟಿದೆ.
ನಿಸರ್ಗದ ಚಿತ್ತಾಕರ್ಷಕ ಚಿತ್ತಾರಗಳು, ಭಾವತೀವ್ರತೆಯ ಬಿಂಬಗಳು, ಭಕ್ತಿ ಭಾವ ಮೂಡಿಸುವ ದೇವರ ಚಿತ್ರಗಳು ಪ್ರಾಣಿಗಳು ಪಕ್ಷಿಗಳು ಬಿದಿರಿನ ಚಿತ್ತಾರಗಳು ಕರಕುಶಲ ವಸ್ತುಗಳು ಹೀಗೆ ನಾನಾ ಬಗೆಯ ಅಲಂಕಾರಿಕ ಸರಕುಗಳು ಈ ಬೀದಿಯುದ್ದಕ್ಕೂ ಜನರನ್ನು ಸೆಳೆಯುತ್ತಿವೆ.
ಬೆಳಿಗ್ಗೆ ಹೊತ್ತು ಜನಸಂದಣಿ ಕಡಿಮೆ ಇತ್ತು. ಹೊತ್ತೇರಿದಂತೆ ಜನಜಂಗುಳಿ ಹೆಚ್ಚುತ್ತಿದೆ. ದೇಶದ ನಾನಾ ಭಾಗ ಗಳ ಕಲಾವಿದರು ತಮ್ಮ ಮನದ ಮೂಸೆಯಲ್ಲಿ ಅರಳಿದ ಬಿಂಬಗಳನ್ನು ಮಾರಾಟಕ್ಕಿಟ್ಟಿದ್ದರೆ, ಅವುಗಳನ್ನು ಖರೀದಿಸಲೂ ವಿವಿಧ ಭಾಗಗಳಿಂದ ಜನ ಇಲ್ಲಿಗೆ ಬಂದಿದ್ದಾರೆ. ತಮಗಿಷ್ಟವಾದ ಕಲಾಕೃತಿ ಖರೀದಿಸಲು ಕಲಾವಿದರ ಬಳಿ ಚೌಕಾಸಿಗೆ ಇಳಿದಿದ್ದಾರೆ.