ಬೆಂಗಳೂರು: ಡಾ.ಬಿ.ರಮಣ ರಾವ್ ಅವರ ‘ವಿಲೇಜ್ ಕ್ಲಿನಿಕ್’ನ ಸುವರ್ಣ ಮಹೋತ್ಸವ ಸಮಾರಂಭವನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ಟಿ. ಬೇಗೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಯಾಗಿ ಗೃಹ ಸಚಿವ ಜಿ. ಪರಮೇಶ್ವರ್ ಪಾಲ್ಗೊಳ್ಳಲಿದ್ದಾರೆ. ಹೃದ್ರೋಗ ತಜ್ಞ ರಮಣ ರಾವ್ ಅವರು ಪ್ರತಿ ಭಾನುವಾರ ಈ ಕ್ಲಿನಿಕ್ ಮೂಲಕ ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಿದ್ದು, ಈ ಕಾರ್ಯ ಐದು ದಶಕಗಳನ್ನು ಪೂರೈಸಿದೆ.
ಇದುವರೆಗೂ ಎರಡು ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. 5 ಸಾವಿರಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಪ್ರಾಯೋಜಿಸಿದೆ. ರೋಗಿಗಳಿಗೆ ಔಷಧಗಳ ಜತೆಗೆ ಮಧ್ಯಾಹ್ನ ಊಟವನ್ನೂ ಒದಗಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ವಾಕಿಂಗ್ ಸ್ಟಿಕ್ಗಳನ್ನೂ ವಿತರಿಸಲಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮನೆಗಳಿಗೆ ಸುಮಾರು 700 ಶೌಚಾಲಯಗಳನ್ನೂ ನಿರ್ಮಿಸಿಕೊಡಲಾಗಿದೆ. ಶಾಲೆಗಳಿಗೆ ಸಮವಸ್ತ್ರ, ಅಧ್ಯಯನ ಸಾಮಗ್ರಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.