ಬೆಂಗಳೂರು: ದುರಾಸೆ ಎಂಬ ರೋಗಕ್ಕೆ ಮದ್ದಿಲ್ಲ. ದುರಾಸೆಯಿಂದಲೇ ಸಮಾಜದ ಶಾಂತಿ, ಸೌಹಾರ್ದತೆ ಕೆಟ್ಟು ಹೋಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಹೇಳಿದರು.
ಪರಿಮಳ ಗೆಳೆಯರ ಬಳಗದ 48ನೇ ವಾರ್ಷಿಕೋತ್ಸವ, ರಾಘವೇಂದ್ರ ರಾಯರ ಆರಾಧನಾಂಗ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೃಪ್ತಿ ಇದ್ದರೆ ದುರಾಸೆ ಇರುತ್ತಿರಲಿಲ್ಲ. ಎಲ್ಲರಿಗೂ ತೃಪ್ತಿ ಬೇಕು. ಹಾಗೆಯೇ ಮಾನವೀಯತೆ ಇರಬೇಕು. ಹುಟ್ಟುವಾಗ ಹೇಗೇ ಇದ್ದರೂ ಮಾನವೀಯ ಪಥದಲ್ಲಿ ಬೆಳೆಯಬೇಕು. ಸಾಯುವಾಗ ಮಾನವರಾಗಿ ಸಾಯಬೇಕು ಎಂದರು.
ಎಸ್. ಜಯಸಿಂಹ ಅವರ ‘ಶ್ರೀಸುಮತೀಂದ್ರ ದರ್ಶನ’ ಕೃತಿಯನ್ನು ಬಿಡುಗಡೆ ಮಾಡಿದ ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ‘ಚರಿತ್ರೆ ಗ್ರಂಥ ಕೇವಲ ಮಾಹಿತಿಯಾಗದೇ ಸಮಾಜಕ್ಕೆ ಏನಾದರೂ ಸಂದೇಶ ಸಿಗಬೇಕು’ ಎಂದು ತಿಳಿಸಿದರು.
ಸುಜಯನಿಧಿತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿದರು.
ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್, ಶಿಕ್ಷಣ ಕ್ಷೇತ್ರದ ವೂಡೆ ಪಿ. ಕೃಷ್ಣ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ವೇದಾಂತದ ಶ್ರೀಹರಿ ವಾಳ್ವೆಕರ್, ದಾಸ ಸಾಹಿತ್ಯ ಸಂಶೋಧನೆ ವಿಭಾಗದ ಸುಳಾದಿ ಹನುಮೇಶಾಚಾರ್ಯ, ವಿಜ್ಞಾನ ವಿಭಾಗದ ವೈ.ಜಿ. ಮಧುಸೂದನ್, ಸುಗಮ ಸಂಗೀತ ಕ್ಷೇತ್ರದ ಪುತ್ತೂರು ನರಸಿಂಹ ನಾಯಕ್, ಮೃದಂಗ ಕಲಾವಿದ ವಿ.ಕೃಷ್ಣ, ವೈದ್ಯಕೀಯ ಕ್ಷೇತ್ರದ ಡಾ.ಎಚ್.ಎನ್. ಸುಬ್ರಹ್ಮಣ್ಯ, ವೈದ್ಯಕೀಯ ಕ್ಷೇತ್ರದ ಡಾ. ಬಿ. ರವಿಶಂಕರ್ ಭಟ್, ಡಾ. ಗಿರಿಧರ ಕಜೆ, ಯೋಗ ಸಾಧಕ ಎಚ್.ಎಸ್. ಅರುಣ್, ಸಮಾಜ ಸೇವಕ ಶ್ರೀಪಾದರಾವ್ ದೇವನಹಳ್ಳಿ ಅವರಿಗೆ ಪರಿಮಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.