ಬೆಂಗಳೂರು: ‘ಸಾಹಿತ್ಯ ರಚನೆಯಲ್ಲಿ ತೊಡಗಿರುವವರಿಗೆ ಯಾವುದೇ ಹಂಗು ಇರಬಾರದು. ಭಾಷೆಯ ಮಿತಿಯನ್ನು ಮೀರಬೇಕು. ಈ ಮೂಲಕ ಭಾಷಾತೀತವಾಗಿ ಮತ್ತು ಕಾಲಾತೀತವಾಗಿ ಬರವಣಿಗೆಯಲ್ಲಿ ಸಾಧನೆ ಮಾಡಬೇಕು’ ಎಂದು ಕವಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ಕರ್ನಾಟಕ ಲೇಖಕಿಯರ ಸಂಘ ಸೋಮವಾರ ಆಯೋಜಿಸಿದ್ದ ‘ವರ್ಷದ ಲೇಖಕಿ ಅಂಕಿತ ಪುಸ್ತಕ ಪುರಸ್ಕಾರ’ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗಂಭೀರ ಮತ್ತು ಜನಪ್ರಿಯ ಸಾಹಿತ್ಯ ಎನ್ನುವುದು ನಾವು ರೂಪಿಸಿಕೊಂಡಿರುವ ಅಭಿಪ್ರಾಯಗಳು. ಸಾಹಿತ್ಯವನ್ನು ಅವರವರ ಭಾವಕ್ಕೆ ವಿಂಗಡಿಸಿಕೊಳ್ಳಲಾಗಿದೆ’ ಎಂದು ವಿವರಿಸಿದರು.
‘ಸಾಹಿತ್ಯ ಹೆಚ್ಚು ಜನರನ್ನು ತಲುಪುವುದು ಸಹ ಮುಖ್ಯವಾಗುತ್ತದೆ. ಕಥನ ಓದುವ ಅಭಿರುಚಿಯನ್ನು ಖ್ಯಾತ ಲೇಖಕಿಯರಾದ ಸಾಯಿಸುತೆ ಮತ್ತು ಡಾ. ರೇಖಾ ಕಾಖಂಡಕಿ ಬೆಳೆಸಿದ್ದಾರೆ’ ಎಂದರು.
2020ರ ಸಾಲಿನ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಸಾಯಿಸುತೆ ಮತ್ತು 2021ರ ಸಾಲಿನ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಡಾ. ರೇಖಾ ಕಾಖಂಡಕಿ ಅವರಿಗೆ ಜಯಂತ ಕಾಯ್ಕಿಣಿ ಅವರು ಪ್ರದಾನ ಮಾಡಿದರು.