ಬೆಂಗಳೂರು: ರಸ್ತೆಯಲ್ಲಿ ಕುಸಿದು ಬಿದ್ದಿದ್ದರಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸುದ್ದಿವಾಹಿನಿ ನಿರೂಪಕ ಗಜಾನನ ಹೆಗಡೆ (39) ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ (ಫೆ.24) ರಾತ್ರಿ ಅಸುನೀಗಿದರು.
ಉತ್ತರಕನ್ನಡ ಜಿಲ್ಲೆಯ ಗಜಾನನ ಅವರು ನಗರದ ಕುಮಾರಸ್ವಾಮಿ ಲೇಔಟ್ನಲ್ಲಿ ವಾಸವಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
‘ಫೆ. 23ರಂದು ರಾತ್ರಿ ಪರಿಚಯಸ್ಥರ ಜೊತೆ ಹೊರಟಿದ್ದ ಗಜಾನನ ಏಕಾಏಕಿ ಕುಸಿದು ಬಿದ್ದಿದ್ದರು. ಅವರನ್ನು ಟಿ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಹೇಳಿದರು.
ಸ್ನೇಹಿತರು ನಾಪತ್ತೆ: ‘ಗಜಾನನ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದ ನಾಲ್ವರು ಪರಿಚಯಸ್ಥರು, ಎಟಿಎಂ ಘಟಕದಿಂದ ಹಣ ತರುವುದಾಗಿ ಹೇಳಿ ಹೋದವರು ವಾಪಸು ಬರಲಿಲ್ಲ. ಗಜಾನನ ಒಬ್ಬರೇ ಇದ್ದರು. ಸಂಬಂಧಿಕರೂ ಬಂದಿರಲಿಲ್ಲ. ವೈದ್ಯರೇ ಚಿಕಿತ್ಸೆ ಮುಂದುವರಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಸಾವಿನ ನಂತರವೂ ಮೃತದೇಹವನ್ನು ನಾವೇ ಕಿಮ್ಸ್ ಶವಾಗಾರಕ್ಕೆ ಸಾಗಿಸಿದ್ದೇವೆ. ಮಂಗಳವಾರವಷ್ಟೇ ಸಂಬಂಧಿಕರೊಬ್ಬರು ಬಂದಿದ್ದು, ಅವರ ಹೇಳಿಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ’ ಎಂದರು.