ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೊರಿಯರ್ ಬಾಯ್ ಸೇರಿದಂತೆ ಇಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ದೊಮ್ಮಲೂರು ಸಮೀಪದ ಬಿಡಿಎ ಉದ್ಯಾನದಲ್ಲಿ ಸತೀಶ್ಕುಮಾರ್ (32) ಎಂಬುವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
‘ಶಿವಾಜಿನಗರದ ಸತೀಶ್ಕುಮಾರ್, ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಅವರ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಉದ್ಯಾನದಲ್ಲಿ ರಾತ್ರಿ ಯುವಕರು ಪಾರ್ಟಿ ನಡೆಸುತ್ತಿದ್ದರು. ಆಗ ನಡೆದ ಗಲಾಟೆಯಲ್ಲಿ ಸತೀಶ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.
ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಲ್ವರು ಆರೋಪಿಗಳ ಬಂಧನ: ಹೆಣ್ಣೂರಿನಲ್ಲಿ ಸ್ನೇಹಿತರೇ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ಧಾರೆ.
ಹೆಣ್ಣೂರಿನ ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (28) ಕೊಲೆಯಾದ ಯುವಕ. ಕೃತ್ಯ ನಡೆಸಿದ ಆರೋಪದ ಮೇರೆಗೆ ಕಿಶೋರ್, ನಿರ್ಮಲ್, ವೆಂಕಟರಾಜು ಹಾಗೂ ಸಂತೋಷ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಕೀರ್ತಿ ಸಂಬಂಧಿ ಮಹಿಳೆಯೊಬ್ಬರ ಜೊತೆಗೆ ಕಿಶೋರ್ ಅಸಭ್ಯವಾಗಿ ವರ್ತಿಸಿದ್ದ. ಇದರ ಮಾಹಿತಿ ತಿಳಿದಿದ್ದ ಕೀರ್ತಿ, ಕಿಶೋರ್ಗೆ ಎಚ್ಚರಿಕೆ ನೀಡಿದ್ದ. ಈ ರೀತಿಯ ವರ್ತನೆ ಮುಂದುವರಿಸದಂತೆ ಬೆದರಿಕೆ ಸಹ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಕಿಶೋರ್ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.